ಚಿಕ್ಕಬಳ್ಳಾಪುರ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ಶ್ರೇಷ್ಠ ಹಾಗೂ ಪವಿತ್ರವಾದ ಕ್ಷೇತ್ರ, ಹೀಗಾಗಿ ಧರ್ಮಸ್ಥಳದ ಜೊತೆ ನಾವು ಇದ್ದೇವೆ ಎಂದು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಮಾತನಾಡಿದ ಶಾಸಕರು, ಧರ್ಮಸ್ಥಳ ಮಂಜುನಾಥಸ್ವಾಮಿ ತುಂಬಾ ಪವರ್ಫುಲ್, ಮಂಜುನಾಥಸ್ವಾಮಿ ಮೇಲೆ ಅಣೆ ಮಾಡಲು ಹೆದರುತ್ತಾರೆ. ಅಂತಹ ಮಂಜುನಾಥನ ಸನ್ನಿಧಿ ಧರ್ಮಸ್ಥಳದ ಮೇಲೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ ಆಗಸ್ಟ್ 16 ರಂದು ಯಲಹಂಕದಿಂದ ಧರ್ಮಸ್ಥಳಕ್ಕೆ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
200ಕ್ಕೂ ಹೆಚ್ಚು ಕಾರುಗಳ ಮೂಲಕ ʻಧರ್ಮಸ್ಥಳದೊಂದಿಗೆ ನಾವಿದ್ದೇವೆʼ ಎಂಬ ಘೋಷವಾಕ್ಯದೊಂದಿಗೆ ಕಾರುಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಧರ್ಮಸ್ಥಳಕ್ಕೆ ತೆರಳಲಿದ್ದೇವೆ. ಅಲ್ಲಿ ದೇವರ ದರ್ಶನ ಪಡೆದು ವಾಪಾಸ್ ಬರಲಿದ್ದೇವೆ. ನಮ್ಮ ನಂತರ ರಾಜ್ಯದ ಇತರೆ ಕ್ಷೇತ್ರಗಳಿಂದಲೂ ಈ ಆಭಿಯಾನ ಆರಂಭವಾಗಲಿದೆ ಎಂದು ಹೇಳಿದರು.
ಇನ್ನೂ ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಕೊಲೆ ಯಾದವರನ್ನ ನಾನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ಹೇಳಿಕೆ ನೋಡಿದ್ರೆ, ಅವನನ್ನೇ ಮೊದಲು ಗಲ್ಲಿಗೇರಿಸಬೇಕು. ಅತ್ಯಾಚಾರ ಕೊಲೆ ಆಗಿರೋದು ಗೊತ್ತಿದ್ದೂ ಹೂತು ಹಾಕಿದ್ರೆ ಆತ ಕೂಡ ಆರೋಪಿಯೇ. ಹಾಗಾಗಿ ಮೊದಲು ಆತನನ್ನ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

