ಚಾಮರಾಜನಗರ: ಜಾಲಹಳ್ಳಿ ಹುಂಡಿ ಗ್ರಾಮದ ಹೊಸ ಬಡಾವಣೆಯಲ್ಲಿ ವಿದ್ಯುತ್ ತಂತಿ ತಗುಲಿದ ನಾಯಿಯನ್ನು ರಕ್ಷಿಸಲು ಹೋದ ಯುವಕನಿಗೆ ವಿದ್ಯುತ್ ಸರ್ಕ್ಯೂಟ್ ನಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಜಾಲಹಳ್ಳಿ ಹುಂಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚಂದ್ರು (38) ಮೃತ ವ್ಯಕ್ತಿಯಾಗಿದ್ದಾನೆ. ಚಂದ್ರು ಎಂದಿನಂತೆ ಬೆಳಿಗ್ಗೆ ಹೊರಬಂದಾಗ ಪಕ್ಕದ ಜಾಗವೊಂದರಲ್ಲಿ ತಂತಿ ಬೇಲಿಗೆ ಸಿಲುಕಿದ್ದ ನಾಯಿ ನರಳಾಡುತ್ತಿರುವುದನ್ನು ಗಮನಿಸಿದ್ದಾನೆ‌. ತಕ್ಷಣ ತೆರಳಿ ಅದನ್ನು ಬಿಡಿಸಲು ಹೋದಾಗ ಈತನಿಗೂ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುತ್ತಾನೆ.

ಮೃತನಿಗೆ ಇಬ್ಬರು ಮಕ್ಕಳಿದ್ದಾರೆ. ಸ್ಥಳಕ್ಕೆ ಪಟ್ಟಣ ಠಾಣೆಯ ಪೊಲೀಸರು, ಚೆಸ್ಕ್ಂ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.