ಚಾಮರಾಜನಗರ : ಜಿಲ್ಲೆಯ ಹನೂರು ತಾಲ್ಲೂಕಿನ ಮೀಣ್ಯಂ ಅರಣ್ಯದಲ್ಲಿ ಐದು ಹುಲಿಗಳ ಸಾವಿಗೆ ಕಾರಣರಾದ ಮೂವರು ಆರೋಪಿಗಳನ್ನು ಹನೂರಿನಲ್ಲಿರುವ ನ್ಯಾಯಾಲಯಕ್ಕೆ ಅರಣ್ಯಾಧಿಕಾರಿಗಳು ಹಾಜರು ಪಡಿಸಿದರು.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿರುವ ಅಪರ ಸಿವಿಲ್ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಸೋಮವಾರ ಬೆಳಗ್ಗೆ 11 ಗಂಟೆಯ ಸಮಯಲ್ಲಿ ಹನೂರಿನ ಸಹಾಯಕ ಅರಣ್ಯಾಧಿಕಾರಿ ಗಜಾನನ ಹೆಗಡೆ ಹಾಗೂ ಪ್ರೋಬೇಷನರಿ ಎಸಿಎಫ್ ಉಮಾಪತಿ ಮತ್ತು ಆರ್ ಎಫ್ ಓ ಮಾದೇಶ್ ರವರು ಅರಣ್ಯ ಸಿಬ್ಬಂದಿಗಳ ಬೆಂಗಾವಲಲ್ಲಿ ಹುಲಿ ಸಾವಿನ ಪ್ರಕರಣದ ಆರೋಪಿಗಳಾದ ಮಾದುರಾಜು, ನಾಗರಾಜು ಮತ್ತು ಕೋನಪ್ಪ ರವರನ್ನು ಕರೆದುಕೊಂಡು ಬಂದರು.
ನ್ಯಾಯಾಧೀಶೆ ಕಾವ್ರಶ್ರೀ ರವರು ಆರೋಪಿಗಳಿಗೆ ವಿಚಾರಣೆ ನಡೆಸಿದಾಗ ಅರಣ್ಯಾಧಿಕಾರಿಗಳು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಬಳಿಕ ನ್ಯಾಯದೀಶೆ ಕಾವ್ಯಶ್ರೀ ರವರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಲು ಸಮ್ಮತ್ತಿಸಿ, ಆರೋಪಿಗಳಿಗೆ ವಿಚಾರಣೆ ವೇಳೆ ಹೊಡೆಯಬಾರದು, ಬೆದರಿಕೆ ಹಾಕಬಾರದು, ಆಹಾರವನ್ನು ಸಕಾಲಕ್ಕೆ ನೀಡಬೇಕು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯದಿಂದ ಹೇಗೆ ಕರೆದುಕೊಂಡು ಹೋದರೋ ಅದೇ ರೀತಿಯಾಗಿ ಗುರುವಾರ (ಜುಲೈ 3 ) ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದರು.
ಆರೋಪಿಗಳ ಪರವಾಗಿ ವಕೀಲ ಮಹದೇವಪ್ರಸಾದ್ ವಕಾಲತು ಹಾಕಿದರು. ಇದಕ್ಕೂ ಮುನ್ನ ಹೂಗ್ಯಂ ಗ್ರಾಮದ ಮಹಿಳೆಯೊಬ್ಬರು ನ್ಯಾಯಾಲಯದ ಆವರಣದಲ್ಲಿ ಆರೋಪಿಗಳಿದ್ದ ಜೀಪಿನ ಬಳಿ ತೆರಳಿ ಯಾಕಪ್ಪ ಹೀಗೆ ಮಾಡಿಕೊಂಡಿರಿ, ಬಾಳಿ ಬದುಕಬೇಕಾದವರು ನೀವು ಎಂದು ಮನಕಲುಕುವ ಹಾಗೆ ಮಾತನಾಡಿದ್ದು ಕಂಡು ಬಂತು.

