ಗುಂಡ್ಲುಪೇಟೆ : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಂದ 10 ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಮತ್ತು ಬಿಳಿ ಚೀಟಿ ವ್ಯವಹಾರ ಆಳವಾಗಿ ಬೇರೂರಿದ್ದು ರೈತಾಪಿ ವರ್ಗಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ ರೈತ ಮುಖಂಡರು ವರ್ತಕರ ವ್ಯವಹಾರಿಕ ನೀತಿಗೆ ಕಡಿವಾಣ ಹಾಕುವಂತೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರಿಗೆ ದೂರಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ಸಭಾಂಗಣದಲ್ಲಿ ನಡೆದ ರೈತರ ಕುಂದುಕೊರತೆ ಸಭೆಯಲ್ಲಿ ಸಮಸ್ಯೆಗಳನ್ನ ಶಾಸಕರ ಮುಂದಿರಿಸಿದ ರೈತ ಮುಖಂಡರು ತೆರಕನಾಂಬಿ ಹಾಗೂ ಗುಂಡ್ಲುಪೇಟೆ ಎಪಿಎಂಸಿಯಲ್ಲಿ ದಲ್ಲಾಳಿಗಳು ಆರಂಭದಲ್ಲಿ ನಾಲ್ಕರಿಂದ ಆರು ರೂಗಳವರೆಗೆ ಶುಲ್ಕ ಪಡೆಯುತ್ತಿದ್ದರು ಆದರೆ ಕಾಲಕ್ರಮೇಣ 10 % ರಷ್ಟಕ್ಕೆ ಏರಿಕೆ ಮಾಡಿರುವುದು ರೈತಾಪಿ ವರ್ಗಕ್ಕೆ ಹೊರೆಯಾಗಿದೆ. ಕಷ್ಟಪಟ್ಟು ತರಕಾರಿ ಬೆಳೆದ ರೈತನಿಗೆ ಇದರಿಂದ ಅನ್ಯಾಯವಾಗುತ್ತಿದೆ ಆದುದರಿಂದ ದಲ್ಲಾಳಿಗಳು ಕಡಿಮೆ ಶುಲ್ಕವನ್ನ ರೈತರಿಂದ ವಸೂಲಿ ಮಾಡುವಂತೆ ಸೂಚಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ರ (2)

ರೈತ ಮುಖಂಡ ಶಿವಪುರ ಮಹದೇವಪ್ಪ ಮಾತನಾಡುತ್ತ ಹಲವಾರು ವರ್ಷಗಳಿಂದ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಬೇಕಿರುವುದು ನಮ್ಮ ರೈತರ ದುರ್ದೈವವಾಗಿದೆ, ರೈತರ ಪರವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಕೇವಲ ಲೆಕ್ಕ ಪುಸ್ತಕಕ್ಕೆ ಸೀಮಿತವಾಯಿತೆ ಹೊರತು ಯಾವುದು ಜಾರಿಯಾಗಿಲ್ಲ, ಸೂರ್ಯಕಾಂತಿ ಬೆಳೆ ಕಟಾವಿಗೆ ಬರುವ ದಿನ ಸನ್ನಿಹಿತವಾಗಿದ್ದರು ಅಧಿಕಾರಿಗಳು ಖರೀದಿ ಕೇಂದ್ರ ತೆರೆಯಲು ಮನಸ್ಸು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿ ಕಾಯ್ದೆಯನ್ವಯ ರೈತರ ಪರವಾಗಿ ಕೆಲಸ ಮಾಡಬೇಕಿರುವ ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ, ರೈತರ ಸೋಗಿನಲ್ಲಿ ಗುಣಮಟ್ಟದಿಂದ ಕೂಡಿರದ ಈರುಳ್ಳಿ ಯನ್ನ ಬಹಿರಂಗವಾಗಿ ಹಲವರು ಮಾರಾಟ ಮಾಡುತ್ತಿರುವುದೇ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

ರೈತರ ದೂರುಗಳನ್ನ ಆಲಿಸಿ ಬಳಿಕ ಮಾತನಾಡಿದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಬಿಳಿ ಚೀಟಿ ವ್ಯವಹಾರಕ್ಕೆ ಶೀಘ್ರದಲ್ಲೇ ಕಡಿವಾಣ ಹಾಕಲು ಕ್ರಮ ಕೈಗೊಳ್ಳುತ್ತೇನೆ, ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರ ತೆರೆಯಲು ಮತ್ತು ಮೂಲಭೂತ ಸೌಕರ್ಯ ಒದಗಿಸಲು ಅಗತ್ಯ ಕ್ರಮಕ್ಕೆ ಸೂಚನೆ ನೀಡಲಾಗುವುದು. ಮಾರುಕಟ್ಟೆ ಪ್ರಾಂಗಣದ ಸ್ವಚ್ಛತೆಗೆ ಮೊದಲ ಪ್ರಾಶಸ್ತ್ಯ ನೀಡುತ್ತೇನೆ. ನಬಾರ್ಡ್ ಮೂಲಕ ಧಾನ್ಯಗಳ ಶಿಥಲೀಕಾರಣ ಕೇಂದ್ರ ಸ್ಥಾಪನೆಗೆ ಅನುಮೋದನೆ ಸಿಕ್ಕಿದ್ದು ತ್ವರಿತವಾಗಿ ನಿರ್ಮಿತವಾದರೆ ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ ಈ ಎಲ್ಲಾ ಕೆಲಸಗಳನ್ನ ಕೆಲವೇ ದಿನಗಳಲ್ಲಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.