ಉಜಿರೆ: ಕವಿತೆ, ಕಾವ್ಯ ರಚನೆಗೆ ಸೂಕ್ಷ್ಮ ಗ್ರಹಿಕೆ ಅಗತ್ಯ. ಲೋಕವನ್ನು ವಿಭಿನ್ನ ದೃಷ್ಟಿಕೋನದಲ್ಲಿ ನೋಡಿ, ಗ್ರಹಿಸಿ, ಹೊಸ ಸಾಹಿತ್ಯ ರಚನೆ ಮಾಡಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸಿಕೊಳ್ಳಬೇಕು ಎಂದು ಸಾಹಿತಿ ಸುಧಾ ಆಡುಕಳ ಹೇಳಿದರು.
ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಇಂದು (ಅ.18) ಆಯೋಜಿಸಲಾಗಿದ್ದ ‘ಕಾವ್ಯ ಕಟ್ಟುವ ಬಗೆ’ ಕಾವ್ಯ ರಚನಾ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾವ್ಯಕ್ಕೆ ಬೇಕಾದುದು ಅನುಭವ. ಯಾವ ವ್ಯಕ್ತಿ ತನ್ನ ಅಂತರಂಗದ ಅಭಿವ್ಯಕ್ತಿಯನ್ನು ಹೊಂದಿರುತ್ತಾನೋ ಆತ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕಾವ್ಯವೆಂಬುದು ಅತಿಥಿಯಿದ್ದಂತೆ. ಅದು ಬಂದಾಗ ಅವಗಣಿಸಿದರೆ, ಬರೆಯದಿದ್ದರೆ ಮರೆತು ಹೋಗುತ್ತದೆ. ಕವಿತೆ ಬರೆಯುವಾಗ ಧೈರ್ಯವಿರಬೇಕು. ಸತ್ಯಕ್ಕೆ ಎದುರಾಗುವ ವಿರೋಧಗಳನ್ನು ಎದುರಿಸುವ ಛಾತಿಯಿರಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋನಿಯಾ ಯಶೋವರ್ಮ ಅವರು, “ನಮ್ಮೊಳಗಿರುವ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ಮಾರ್ಗವೇ ಕಾವ್ಯ. ಕಾವ್ಯ ರಚನೆಯೆಂಬುದು ಭಾವ ಮತ್ತು ಕನಸುಗಳನ್ನು ಸಾಲುಗಳ ಮೂಲಕ ಅರ್ಥೈಸುವುದಾಗಿದೆ” ಎಂದರು.
ಎಸ್.ಡಿ.ಎಂ. ಕಾಲೇಜು ಅವಕಾಶಗಳ ಸಾಗರ ಎಂದ ಅವರು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ. ಬಿ. ಯಶೋವರ್ಮ ಅವರು ವಿದ್ಯಾರ್ಥಿ ಪೂರಕ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುತ್ತಿದ್ದರು ಎಂದು ಸ್ಮರಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, “ನಮ್ಮ ಸುಖ- ದುಃಖಗಳನ್ನು ಅಭಿವ್ಯಕ್ತಗೊಳಿಸುವುದಕ್ಕಾಗಿ ಇರುವ ವೇದಿಕೆ ಕಾವ್ಯ. ಕಾವ್ಯಕ್ಕೆ ಲಯ, ಸಂಗೀತ ಸೇರಿದಾಗ ಅದು ಇನ್ನಷ್ಟು ಮಧುರವಾಗುತ್ತದೆ. ಕಾವ್ಯ ರಚನೆಗೆ ಓದು ಶಕ್ತಿ ನೀಡುತ್ತದೆ” ಎಂದರು.
ಕಾರ್ಯಕ್ರಮ ಸಂಯೋಜಕ, ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ, ವಿಭಾಗದ ಇತರ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕನ್ನಡ ವಿಭಾಗ ಮುಖ್ಯಸ್ಥೆ ಡಾ. ಬೋಜಮ್ಮ ಕೆ.ಎನ್. ಸ್ವಾಗತಿಸಿ, ಪ್ರಸ್ತಾವಿಸಿದರು. ತೃತೀಯ ಬಿ.ಎ. ವಿದ್ಯಾರ್ಥಿಗಳಾದ ಪ್ರಜ್ವಲ್ ಜೈನ್ ವಂದಿಸಿ, ಅಶ್ವಿತ ನಿರೂಪಿಸಿದರು.