News Karnataka Kannada
Saturday, April 27 2024
ಕ್ಯಾಂಪಸ್

ಉಜಿರೆ: ರಸ್ತೆ ನಿಯಮ ಉಲ್ಲಂಘಿಸಿದವರಿಗೆ ಚಾಕಲೇಟ್!

Sdm
Photo Credit : News Kannada

ಉಜಿರೆ : ರಸ್ತೆ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಸಂಚಾರಿ ಪೊಲೀಸರ ಕಣ್ಣಿಗೆ ಬಿದ್ದರೆ ದಂಡ ಕಟ್ಟಬೇಕಾಗುತ್ತದೆ. ಆದರೆ ಶನಿವಾರ ಉಜಿರೆಯು ಇದಕ್ಕೆ ತದ್ವಿರುದ್ಧದ ವಿದ್ಯಮಾನಕ್ಕೆ ಸಾಕ್ಷಿಯಾಯಿತು.

ಹೆಲ್ಮೆಟ್ ಧರಿಸದೆ ಇರುವವರು, ಹೆಚ್ಚು ವೇಗದಲ್ಲಿ ವಾಹನ ಚಲಾಯಿಸುವವರು, ಸೀಟ್ ಬೆಲ್ಟ್ ಧರಿಸದವರೂ ಸೇರಿದಂತೆ ರಸ್ತೆ ನಿಯಮ ಉಲ್ಲಂಘಿಸಿದವರನ್ನು ನಿಲ್ಲಿಸಿ ಉಜಿರೆ ಎಸ್.ಡಿ.ಎಂ ಕಾಲೇಜಿನ ತೃತೀಯ ವರ್ಷದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸಂಚಾರಿ ಪೊಲೀಸರೊಂದಿಗೆ ಚಾಕಲೇಟ್ ಹಾಗೂ ಭಿತ್ತಿಪತ್ರ ನೀಡಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಮಹತ್ವವನ್ನು ತಿಳಿ ಹೇಳಿದರು.

ಕಾಲೇಜು ರಸ್ತೆಯಿಂದ ಆರಂಭವಾದ ಅಭಿಯಾನ ಉಜಿರೆ ಮುಖ್ಯ ರಸ್ತೆಯವರೆಗೆ ಸಾಗಿತು. ಹಿರಿಯ ಪೊಲೀಸ್ ಅಧಿಕಾರಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಘೋಷ ವಾಕ್ಯಗಳನ್ನು ಕೂಗಿದರು.

ದಂಡ ಹಾಕುತ್ತಾರೋ ಎಂಬ ಭಯದಲ್ಲಿದ್ದ ಪ್ರಯಾಣಿಕರಿಗೆ ಚಾಕಲೇಟ್ ನೀಡಿದಾಗ ವಿಭಿನ್ನ ಭಾವನೆಗಳನ್ನು ವ್ಯಕ್ತಪಡಿಸಿದರು. ಕೆಲವರು ನಗುತ್ತಾ ಸಿಹಿ ಸ್ವೀಕರಿಸದರೆ, ಇನ್ನು ಕೆಲವರು ನಾಚಿಕೆಯ ಸ್ವಭಾವ ಹಾಗೂ ಆಶ್ಚರ್ಯದಿಂದ ಚಾಕಲೇಟ್ ಸ್ವೀಕರಿಸಿ ಮುಜುಗರಕ್ಕೊಳಗಾದರೂ ಬಚಾವ್ ಆದೆ ಎನ್ನುತ್ತಾ ತಮ್ಮ
ಪ್ರಯಾಣವನ್ನು ಮುಂದುವರೆಸಿದರು.

ಈ ಕಾರ್ಯಕ್ರಮಕ್ಕೆ ಉಜಿರೆ ಎಸ್.ಡಿ.ಎಂ ಕಾಲೇಜಿನ ಟ್ಯಾಲೆಂಟ್ಸ್ ಕಾರ್ನರ್‌ನಲ್ಲಿ ಚಾಲನೆ ದೊರೆತಿದ್ದು ಬೆಳ್ತಂಗಡಿ ಸಂಚಾರಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಡಿಯಪ್ಪ ಗೌಡ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಬೆಲೆಬಾಳುವ ವಾಹನವನ್ನು ಖರೀದಿಸಿದರೆ ಸಾಲದು. ರಸ್ತೆ ನಿಯಮಗಳಿಗನುಗುಣವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಚಲಿಸಬೇಕು ಎಂದು ಹೇಳಿದರು.

ಮನೆಯ ನೀತಿ ನಿಯಮಗಳಿಗೆ ಹೇಗೆ ಬದ್ಧರಾಗಿರುತ್ತೇವೋ ಅಂತೆಯೇ ರಸ್ತೆ ನಿಯಮಗಳನ್ನೂ ಗೌರವಿಸಬೇಕು. ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಅಪಘಾತ ಸಂಭವಿಸುವುದರಿಂದ ಅಪರಾಧ ತಡೆ ಮಾಸ ಆಚರಿಸಿ ಜಾಗೃತಿ
ಮೂಡಿಸಲಾಗುತ್ತದೆ ಎಂದರು.

ವಾಹನ ಸವಾರರು ರಸ್ತೆಯಲ್ಲಿರುವವರು ತಮ್ಮ ಮನೆಯವರು ಎಂದು ಭಾವಿಸಬೇಕು. ನಾವು ರಕ್ತದಾನ ಮಾಡಬೇಕು ಆದರೆ ರಸ್ತೆಯಲ್ಲಿ ನಮ್ಮ ರಕ್ತ ಚೆಲ್ಲಬಾರದು ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಜಯಕುಮಾರ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ರಸ್ತೆ ನಿಯಮ ಉಲ್ಲಂಘಿಸುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಲಾಯಿತು. ವಾಹನ ಸಂಚಾರದ ಹೊಸ ನಿಯಮಗಳನ್ನು ತಿಳಿಯಲು ಕಾರ್ಯಕ್ರಮ ಸಹಕಾರಿಯಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಮಾಹಿತಿಯನ್ನು ತಿಳಿಸುತ್ತೇವೆ ಎಂದು ವಿದ್ಯಾರ್ಥಿಗಳು ಅನುಭವ
ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ರತ್ನಾವತಿ.ಕೆ, ಸಹಾಯಕ ಪ್ರಾಧ್ಯಾಪಕ ಭಾನುಪ್ರಕಾಶ್ ಬಿ.ಇ, ಡಾ.ಲಕ್ಷ್ಮಿ ನಾರಾಯಣ್ ಕೆ. ಎಸ್, ಸೂರ್ಯನಾರಾಯಣ್ ಭಟ್ ಪಿ, ಸುಮನ್ ಜೈನ್ ಹಾಗೂ ಸಂಚಾರಿ ಪೊಲೀಸ್ ವಿಭಾಗದ ಆರಕ್ಷಕರು ಉಪಸ್ಥಿತರಿದ್ದರು.

ವರದಿ: ರಕ್ಷಾ ಕೋಟ್ಯಾನ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು