ಉಜಿರೆ, ಸೆ.5: ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಕ ವೃತ್ತಿಯು ಹಲವಾರು ಸವಾಲುಗಳಿಂದ ಕೂಡಿದ್ದು, ಶಿಕ್ಷಕರು ಆತ್ಮಾವಲೋಕನ ಮಾಡಿಕೊಂಡು ದೈಹಿಕ- ಮಾನಸಿಕ ದೃಢತೆ ಕಾಯ್ದುಕೊಂಡು ಸ್ವಯಂಶಿಸ್ತಿನೊಂದಿಗೆ ಮುಂದುವರಿಯುವ ಅಗತ್ಯವಿದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಹೇಳಿದರು.
ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆ, ಜತೆಗೆ ಬೇರೆ ಬೇರೆ ಜವಾಬ್ದಾರಿಗಳ ನಿರ್ವಹಣೆಯಂಥ ಸವಾಲುಗಳನ್ನು ಶಿಕ್ಷಕರು ಎದುರಿಸಬೇಕಾಗಿದೆ. ಬಡವ-ಶ್ರೀಮಂತ, ಜಿಜ್ಞಾಸುಗಳು-ತುಂಟರು, ಶೀಘ್ರಮತಿಗಳು-ಮಂದಗತಿಯಲ್ಲಿ ಅರ್ಥ ಮಾಡಿಕೊಳ್ಳುವವರು ಇತ್ಯಾದಿ ವಿವಿಧ ಮನಃಸ್ಥಿತಿಯ ವಿದ್ಯಾರ್ಥಿಗಳನ್ನು ಸಂಭಾಳಿಸಬೇಕಾಗುತ್ತದೆ. ಹಾಗಾಗಿ ಶಿಕ್ಷಕರು ದೈಹಿಕ-ಮಾನಸಿಕವಾಗಿ ದೃಢತೆ ಕಾಯ್ದುಕೊಂಡು ಮುಂದುವರಿಯದಿದ್ದಲ್ಲಿ ಕಷ್ಟವಾಗಲಿದೆ ಎಂದು ಅವರು ಎಚ್ಚರಿಸಿದರು.
“ಶಿಕ್ಷಕ ವೃತ್ತಿ ಬಹಳ ಗೌರವಯುತ ವೃತ್ತಿಯಾಗಿದೆ. ಹಲವು ಜವಾಬ್ದಾರಿಗಳು, ಉದ್ದೇಶಿತ ಗುರಿಗಳು ಹಾಗೂ ಬಾಧ್ಯತೆಗಳನ್ನು ಪೂರೈಸುವ ವೇಳೆ ಮಾನವೀಯತೆ ನಲುಗುತ್ತ, ಮಾನವ ಸಂಬಂಧಗಳು ಹಾನಿಗೊಳ್ಳುತ್ತಿರುವಂತೆ ಅನ್ನಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ವರ್ಷಪೂರ್ತಿ ಒತ್ತಡದಲ್ಲಿರುವ ಶಿಕ್ಷಕರಿಗೆ ಇಂತಹ ಕಾರ್ಯಕ್ರಮಗಳು ಪರಸ್ಪರ ಬಾಂಧವ್ಯ ವೃದ್ಧಿಗೆ ಸಹಾಯ ಮಾಡಬಲ್ಲವು. ಸವಾಲುಗಳನ್ನು ಎದುರಿಸಲು ನೈತಿಕ ಸ್ಥೈರ್ಯ, ಆತ್ಮಬಲವನ್ನು ತುಂಬಬಲ್ಲವು” ಎಂದು ಅವರು ಅಭಿಪ್ರಾಯಪಟ್ಟರು.
ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಶಶಿಶೇಖರ ಎನ್. ಕಾಕತ್ಕರ್, ಆಡಳಿತ ಕುಲಸಚಿವೆ ಡಾ. ಶಲೀಪ್ ಕುಮಾರಿ, ಪರೀಕ್ಷಾಂಗ ಕುಲಸಚಿವೆ ನಂದಾಕುಮಾರಿ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ ಪಿ., ವಾಣಿಜ್ಯ ನಿಕಾಯದ ಡೀನ್ ಶಕುಂತಲಾ, ವಿಜ್ಞಾನ ನಿಕಾಯದ ಡೀನ್ ಡಾ. ಸವಿತಾ ಕುಮಾರಿ, ಐಕ್ಯುಎಸಿ ಸಂಯೋಜಕ ಡಾ. ಗಜಾನನ ಆರ್. ಭಟ್ ಹಾಗೂ ಬೋಧಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ- ಗಣಿತ ವಿಭಾಗ ಮುಖ್ಯಸ್ಥ ಗಣೇಶ್ ನಾಯಕ್ ಪ್ರಸ್ತಾವಿಸಿ, ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ ಕಾರ್ಯಕ್ರಮ ನಿರ್ವಹಿಸಿದರು. ಬಿ.ವೋಕ್ ವಿಭಾಗದ ಬೋಧಕ ಸಿಬ್ಬಂದಿ ವಿವಿಧ ಮನೋರಂಜನೆ ಕಾರ್ಯಕ್ರಮ ಸಂಯೋಜಿಸಿದರು.