ಉಜಿರೆ, ಜ.31: ರಾಷ್ಟ್ರೀಯ ಮೌಲ್ಯಾಂಕನ ಹಾಗೂ ಮೌಲ್ಯಮಾಪನದ ನಾಲ್ಕನೇ ಆವೃತ್ತಿ ಪ್ರಕ್ರಿಯೆಯ ಭಾಗವಾಗಿ ಮೂವರು ಸದಸ್ಯರ ನ್ಯಾಕ್ ತಂಡವು ಜನವರಿ 30 ಹಾಗೂ 31ರಂದು ಎರಡು ದಿನಗಳ ಕಾಲ ಉಜಿರೆ ಶ್ರೀ ಧ.ಮ. ಕಾಲೇಜಿಗೆ ಭೇಟಿ ನೀಡಿತು.
ಓರಿಸ್ಸಾದ ಕಲಹಂಡಿ, ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ, ಸಂಜಯ್ ಕುಮಾರ್ ಸತಪತಿ ಅಧ್ಯಕ್ಷತೆಯ ನ್ಯಾಕ್ ಸಮಿತಿಯಲ್ಲಿ ಸದಸ್ಯ ಸಂಯೋಜಕರಾಗಿ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಕರಣ್ ಜೀತ್ ಸಿಂಗ್ ಹಾಗೂ ಸದಸ್ಯರಾಗಿ ಮಹಾರಾಷ್ಟ್ರದ ಲಾತೂರಿನ ರಾಜಶ್ರೀ ಶಾಹು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮಹಾದೇವ ಗವಹಾನೆ ಎರಡು ದಿನಗಳ ಕಾಲ ಕಾಲೇಜಿನ ಸಮಗ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಬೆಳವಣಿಗೆಯ ಸ್ವರೂಪದ ವಿಸ್ತ್ರತ ಮಾಹಿತಿ ಪಡೆದರು.
ನ್ಯಾಕ್ ನಿಗದಿಪಡಿಸಿದ ವಿವಿಧ ವಲಯಗಳಲ್ಲಿ ಕಳೆದ ಏಳು ವರ್ಷಗಳ ಅವಧಿಯಲ್ಲಿ ಕಾಲೇಜಿನ ಪ್ರಗತಿ ಮತ್ತು ಸಾಧನೆಯ ಹೆಜ್ಜೆಗಳನ್ನು ಅವಲೋಕಿಸಿದರು. ಬೋಧನೆ ಮತ್ತು ಕಲಿಕಾ ವ್ಯವಸ್ಥೆ, ಪಠ್ಯಕ್ರಮ, ಅಧ್ಯಯನ ಮಂಡಳಿ, ಸಂಶೋಧನಾ ಮತ್ತು ವಿಸ್ತರಣಾ ಚಟುವಟಿಕೆ, ಮೂಲಭೂತ ಸೌಕರ್ಯ, ವಿದ್ಯಾರ್ಥಿ-ಸ್ನೇಹಿ ವ್ಯವಸ್ಥೆ, ಆಡಳಿತ ನಿರ್ವಹಣೆ ಮತ್ತು ಶೈಕ್ಷಣಿಕ ನಾಯಕತ್ವ, ಸಾಂಸ್ಥಿಕ ಮೌಲ್ಯಗಳು ಮತ್ತು ಅತ್ಯುತ್ತಮ ಮಾದರಿ ಪ್ರಯೋಗಗಳನ್ನು ಈ ಸಂದರ್ಭದಲ್ಲಿ ಪರಿಶೀಲಿಸಿದರು.
ತಂಡದ ಸದಸ್ಯರನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಡಾ.ಜಯಕುಮಾರ ಶೆಟ್ಟಿ ಅವರು ಸ್ವಾಗತಿಸಿದರು. ತದನಂತರ ಪ್ರಾಂಶುಪಾಲರು ಸಂಸ್ಥೆಯ ಸಾಧನೆಯ ಸಮಗ್ರ ಸ್ವರೂಪದ ವಿಸ್ತ್ರತ ಮಾಹಿತಿಯನ್ನು ಪ್ರಸ್ತುತಪಡಿಸಿದರು.
ಸಮಿತಿಯ ತಂಡವು ಕಾಲೇಜಿನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳು, ಅತಿಥಿ ಉಪನ್ಯಾಸ. ಹಳೆಯ ವಿದ್ಯಾರ್ಥಿಗಳೊಂದಿಗಿನ ಸಂವಾದ, ಸಮುದಾಯಕೇಂದ್ರಿತ ವಿಸ್ತರಣಾ ಚಟುವಟಿಕೆಗಳು ಹಾಗೂ ಅಧ್ಯಾಪಕರ ಸಂಶೋಧನೆ ಮತ್ತು ಬೋಧನ ಸಂಬಂಧಿತ ಸಾಧನೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ವಿವಿಧ ವಿಭಾಗಗಳ ಪ್ರಯೋಗಾಲಯಗಳು, ಕ್ರೀಡಾ ಸೌಲಭ್ಯಗಳು, ಹಾಸ್ಟೆಲ್ ವ್ಯವಸ್ಥೆ, ಕಲಾಕೇಂದ್ರ ಸೇರಿದಂತೆ ವಿವಿಧ ಕೇಂದ್ರಗಳಿಗೂ ಭೇಟಿ ನೀಡಿದ ತಂಡದ ಸದಸ್ಯರು ಇಲ್ಲಿನ ಅತ್ಯಾಧುನಿಕ ವ್ಯವಸ್ಥೆಯ ವಿವರಗಳನ್ನು ಪಡೆದರು. ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ ತಂಡದ ಸದಸ್ಯರು ಕಾಲೇಜಿನ ಶೈಕ್ಷಣಿಕ ಗುಣಮಟ್ಟದ ಕುರಿತು ಅಭಿಪ್ರಾಯ ಸಂಗ್ರಹಿಸಿದರು. ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೂ ಪ್ರತ್ಯೇಕವಾಗಿ ಸಭೆ ನಡೆಸಿದರು.
ಜನವರಿ 31ರ ಸಂಜೆ ನಡೆದ ಸಮಿತಿ ಭೇಟಿಯ ಸಮಾರೋಪ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಪ್ರೊ. ಸಂಜಯ ಕುಮಾರ್ ಸತಪತಿ ಕಾಲೇಜಿನ ತಂಡಸ್ಪೂರ್ತಿ ಪ್ರಶಂಸನೀಯ ಶ್ಲಾಘಿಸಿದರು. ಕಾಲೇಜಿನಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳು ಮತ್ತು ಕಲಿಕಾ ವ್ಯವಸ್ಥೆಯು ಆಶಾದಾಯಕವಾಗಿದೆ. ಸಂಸ್ಥೆಯ ಆಡಳಿತ ಮಂಡಳಿಯ ಸಮರ್ಥ ಮಾರ್ಗದರ್ಶನ ಮತ್ತು ಅಧ್ಯಾಪಕ ಅಧ್ಯಾಪಕೇತರ ವೃಂದದ ಕಾರ್ಯನಿಷ್ಠೆಯ ಅನುಕರಣೀಯ ಎಂದು ಅಭಿಪ್ರಾಯಪಟ್ಟರು, ಸಂಸ್ಥೆಯ ಬಟ್ಟೆಯಲ್ಲಿ ಪ್ರತಿಯೊಬ್ಬರನ್ನೂ ಪಾತ್ರವಿರುತ್ತದೆ. ನಿಸ್ವಾರ್ಥ ಮನೋಭಾವದಿಂದ ಎಲ್ಲರೂ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ನುಡಿದರು.