ಮಂಗಳೂರು: ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾ ಭಾರತಿ ಕರ್ನಾಟಕದ ವಿವಿಧ ಶಾಲೆಗಳ ಪ್ರಧಾನಾಚಾರ್ಯರ ಎರಡು ದಿನಗಳ ಕಾರ್ಯಗಾರವನ್ನು ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ಕೆ. ಸುಧಾಕರ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಅವರು ನಾವು ಭೂತಕಾಲದ ಬಗ್ಗೆ ಯೋಚನೆ ಮಾಡುವುದರ ಬದಲು ಭವಿಷತ್ ಕಾಲದ ಬಗ್ಗೆ ಚಿಂತನೆ ಮಾಡಬೇಕೆಂದರು. ನಾವು ನಮ್ಮ ಬೆಳವಣಿಗೆಯ ಜೊತೆಗೆ ವಿದ್ಯಾರ್ಥಿ ಮತ್ತು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಯೋಜನೆಯನ್ನು ರೂಪಿಸಬೇಕು. ಆಗ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆ. ಇಂತಹ ಕಾರ್ಯಗಾರದಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಜ್ಞಾನವನ್ನು ನಾವು
ಪಡೆಯಲು ಸಾಧ್ಯವಿದೆ. ಪಾಠದ ಭೋದನೆ ಮಾತ್ರವಲ್ಲದೆ ಇನ್ನಿತರ ವಿಷಯದಲ್ಲಿ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು. ನಾವು ವಿದ್ಯಾರ್ಥಿಗಳನ್ನು ದೇಶಕ್ಕೆ ಪೂರಕವಾದ ವ್ಯಕ್ತಿಯನ್ನಾಗಿ ರೂಪಿಸುವಂತಹ ಕಾರ್ಯದಲ್ಲಿ ಪ್ರವೃತ್ತರಾಗಬೇಕೆಂದು ಹೇಳಿದರು.
ವಿದ್ಯಾಭಾರತಿ ಕ್ಷೇತ್ರೀಯ ಸಹಸಂಘಟನಾ ಕಾರ್ಯದರ್ಶಿ ಜಿ. ಆರ್. ಜಗದೀಶರು ಮಾತನಾಡಿ ವಿದ್ಯಾ ಭಾರತೀಯ ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಸಮಾಜ ಮುಖಿ ಬದುಕು ರೂಪಿಸಲು ಸಿದ್ದಗೊಳಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಾವು ನಮ್ಮ ಶಾಲೆಯಲ್ಲಿ ಅಳವಡಿಸಬೇಕೆಂದು ಕರೆ ನೀಡಿದರು. ಈ ಶಿಕ್ಷಣದ ಮೂಲಕ ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ವಿದ್ಯಾ ಭಾರತಿ ಶಾಲೆಯು ಶಿಸ್ತನ್ನು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕಲಿಸುತ್ತದೆ ಎಂದರು. ಇಂತಹ ಕಾರ್ಯಗಾರವು ಪ್ರಧಾನಾಚಾರ್ಯರ ಕಾರ್ಯವನ್ನು ಇನ್ನೂ ಹೆಚ್ಚಿಸುವಂತೆ ಮಾಡುತ್ತದೆ. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಯಕ್, ಸಮಾಜಶಾಸ್ತ ಪುಸ್ತಕದ ಲೇಖಕರಾದ ಡಾ. ಚ.ನ ಶಂಕರರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ವಸಂತ ಮಾಧವ, ವಂದನಾರ್ಪಣೆಯನ್ನು ರಾಜ್ಯ ಸಹ ಕಾರ್ಯದರ್ಶಿ ನರ್ಸಪ್ಪ ಹಾಗೂ ನಿರೂಪಣೆಯನ್ನು ಸುಜತಾ ನೆರವೇರಿಸಿದರು.