ಗೋಕರ್ಣ: “ಸಾಧಿಸಬೇಕೆಂಬ ಛಲವೇ ನಿಮ್ಮನ್ನು ವಿಶ್ವಮಟ್ಟಕ್ಕೆ ಕರೆದೊಯ್ಯಲು ಸಹಕಾರಿ” ಎಂದು ಕುಮಟಾದ ಅಂತಾರಾಷ್ಟ್ರೀಯ ಪವರ್ ಲಿಪ್ಟಿಂಗ್ ಕ್ರೀಡಾಪಟು ಶ್ರೀವೆಂಕಟೇಶ ನಾರಾಯಣ ಪ್ರಭು ಅಭಿಪ್ರಾಯಪಟ್ಟರು.
ಸಾರ್ವಭೌಮ ಗುರುಕುಲದಲ್ಲಿ ಮೂರು ದಿನಗಳ ಕಾಲ ನಡೆಯುವ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು “ನಾನೂ ಕೂಡ ಪವರ್ ಲಿಪ್ಟಿಂಗ್ ಅಭ್ಯಾಸಕ್ಕೆಂದು ಮಂಗಳೂರಿಗೆ ಬೆಳಗಿನ ಜಾವ ಹೋಗಿ, ಅಭ್ಯಾಸ ಮಾಡಿ ರಾತ್ರಿ ವಾಪಾಸಾಗುತ್ತಿದ್ದೆ. ಅದರ ಫಲವಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಯಿತು. ನೀವೂ ಕೂಡ ನಿರಂತರ ಪರಿಶ್ರಮವನ್ನು ಮಾಡಿ, ವಿಶ್ವವು ಗುರುತಿಸುವಂತೆ ಆಗಲಿ” ಎಂದು ಹಾರೈಸಿದರು.
ಮತ್ತೋರ್ವ ಚೆಸ್ ಕ್ರೀಡಾಪಟು ಶ್ರೀಸದಾನಂದ ಹೆಬ್ಬಾರ್ ಮಾತನಾಡಿ “ಕಷ್ಟವನ್ನು ಅನುಭವಿಸದಷ್ಟು ನೀವು ಗಟ್ಟಿಯಾಗುತ್ತಾ ಹೋಗುತ್ತೀರಿ. ಇದು ನನ್ನ ಅನುಭವದ ಮಾತು. ಸೋತವರು ಗೆಲುವಿಗಾಗಿ ಹಂಬಲಿಸಿ, ಗೆದ್ದವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ” ಎಂದು ಸಲಹೆ ಮಾಡಿದರು.
ಇದಕ್ಕೂ ಮೊದಲು ಗಣ್ಯರನ್ನು ಕ್ರೀಡಾಗೌರವದೊಂದಿಗೆ ಸ್ವಾಗತಿಸಲಾಯಿತು. ಜಿಲ್ಲೆ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಗುರುಕುಲವನ್ನು ಪ್ರತಿನಿಧಿಸಿದ ಶ್ರೇಷ್ಠ ಗುಡಿಗಾರ್, ಭರತ ಕುಮಾರ್, ತನ್ವೀಗೌರೀ, ಸ್ನೇಹಾ ಬಿರಾದಾರ್ ಗಣ್ಯರಿಗೆ ಕ್ರೀಡಾಜ್ಯೋತಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿವಿಯ ನಿರ್ದೇಶಕ ಶ್ರೀಪಾದ ಭಟ್ಟ ವಹಿಸಿದ್ದರು. ವಿವಿವಿ ವ್ಯವಸ್ಥಾ ಪರಿಷತ್ ಗೌರವಾಧ್ಯಕ್ಷ ಡಿ.ಡಿ ಶರ್ಮಾ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ, ಪಿಯು ವಿಭಾಗದ ಪ್ರಾಚಾರ್ಯರಾದ ಶ್ವೇತಾ, ಸಾರ್ವಜನಿಕ ಸಂಪರ್ಕಾಧಿಕಾರಿ ಶಿಶಿರ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಪ್ರಜ್ಞಾ ಹೆಬ್ಬಾರ್ ಸ್ವಾಗತಿಸಿ, ದೀಪಾ ನಾಯಕ್ ಗಣ್ಯರ ಪರಿಚಯವನ್ನು ಮಾಡಿದರು. ಅಕ್ಷಯ ಅಡಿಗುಂಡಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರೆ, ವಿನಯ್ ಭಟ್ಟ ವಂದಿಸಿದರು. ಲೋಹಿತ ಹೆಬ್ಬಾರ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಅನಂತರ ಓಟ, ರಿಲೆ, ಲಿಂಬು ಚಮಚ, ಗುಂಡು ಎಸೆತ, ವಾಲಿಬಾಲ್, ಕೋಕೋ ಸ್ಪರ್ಧೆಗಳು ನಡೆದವು. ಎಲ್ಲ ವಿದ್ಯಾರ್ಥಿಗಳೂ ಸಂಯೋಜಿಸಿದ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು.