ಬೆಳ್ತಂಗಡಿ: ಗೆಲುವು ನಮ್ಮದೆಂಬ ಮನೋಭಾವನೆಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಕೆಲವೊಮ್ಮೆ ದೈನಂದಿನ ವಾತಾವರಣ, ಮನೋಸ್ಥಿತಿ ಸೋಲಿಗೆ ಕಾರಣವಾಗಲು ಬಹುದು.ಒಂದೊಮ್ಮೆ ಸೋಲು ಬಂದರು ಅದನ್ನು ಲೆಕ್ಕಿಸದೆ ಅವಿರತ ಪ್ರಯತ್ನದಿಂದ ಮುಂದುವರಿದರೆ ಅದು ಮುಂದಿನ ಗೆಲುವಿನ ಮೆಟ್ಟಲಾಗುತ್ತದೆ ಎಂದು ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್ ಹೇಳಿದರು.
ಅವರು ಉಜಿರೆಯಲ್ಲಿ ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ, ಮಂಗಳೂರು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು,ಉಜಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಹತ್ತು ಹಲವು ಸಂಗತಿಗಳು ನಮ್ಮನ್ನು ಆಕರ್ಷಿಸುತ್ತವೆ. ನಮ್ಮ ನಿಜಶಕ್ತಿ ಅರಿತು ಆಸಕ್ತಿ ಇರುವ ವಿಚಾರಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.ಶಿಕ್ಷಣವು ನಮ್ಮನ್ನು ರೂಪಿಸಬಲ್ಲ ವಿಶಿಷ್ಟ ಶಕ್ತಿಯಾಗಿದ್ದು ಇದರ ಜತೆ ನಮ್ಮಲ್ಲಿರುವ ಸೂಕ್ತ ಪ್ರತಿಭೆ ಹೊರ ಹೊಮ್ಮಲು ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಇವುಗಳನ್ನು ಬಳಸಿಕೊಳ್ಳುವುದು ಪ್ರತಿ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ ಎಂದರು.
ದ. ಕ.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ ಸಿ. ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ ನ್ಯಾಯಯುತ ಪ್ರಾಮಾಣಿಕವಾಗಿ ನೀಡುವ ತೀರ್ಪುಗಳು ಉತ್ತಮರನ್ನು ಗುರುತಿಸಿ ಅವರ ಭವಿಷ್ಯಕ್ಕೆ ಮುನ್ನುಡಿಯಾಗುತ್ತವೆ. ಜಿಲ್ಲೆಯ ವಿದ್ಯಾರ್ಥಿಗಳು ಸೂಕ್ಷ್ಮ ಹಾಗೂ ಜ್ಞಾನವಂತರಾಗಿದ್ದು ಶಿಕ್ಷಣ ಸಚಿವರಿಂದಲೇ ಪ್ರಶಂಸೆಯನ್ನು ಪಡೆದಿರುತ್ತಾರೆ. ಇಲ್ಲಿನ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳು ಕೂಡ ವಿಶೇಷ ಆಸಕ್ತಿಯನ್ನು ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಧ. ಮಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಬಿ. ಸೋಮಶೇಖರ ಶೆಟ್ಟಿ ಶುಭ ಹಾರೈಸಿದರು. ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಎನ್.ದಿನೇಶ್ ಚೌಟ ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ಕಾರ್ಯಕ್ರಮ ನಿರೂಪಿಸಿದರು.ವೈಸ್ ಪ್ರಿನ್ಸಿಪಾಲ್ ಪ್ರಮೋದ್ ಕುಮಾರ್ ಬಿ. ವಂದಿಸಿದರು.
ಜಿಲ್ಲೆಯ ಸುಮಾರು 40 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಬಂಧ,ಗೀತ ಗಾಯನ, ರಸಪ್ರಶ್ನೆ, ವಿಚಾರ ಸಂಕಿರಣ, ಚಿತ್ರಕಲೆ,ಸಂಗೀತ ಮೊದಲಾದ 12 ವಿಷಯಗಳಲ್ಲಿ ಸ್ಪರ್ಧೆಗಳು ನಡೆದವು. ಉಪನಿರ್ದೇಶಕ ಸಿಡಿ ಜಯಣ್ಣ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.