ಬೆಳ್ತಂಗಡಿ: 268 ಮಂದಿ ಮಕ್ಕಳಿರುವ ಸರಕಾರಿ ಶಾಲೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಸುತ್ತಿದ್ದಾರೆ. ಶಾಲೆಗೆ ಬೇಕಾದ ಅಗತ್ಯ ಸವಲತ್ತು ಒದಗಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಉಜಿರೆಗೆ ಆಗಮಿಸಿದ ಸಚಿವರು ಸೆ.16 ರಂದು ಕನ್ಯಾಡಿ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು.
ಅತಿಥಿ ಶಿಕ್ಷಕರ ನೇಮಕಾತಿ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಹಂತದಲ್ಲಿದ್ದು ಸೋಮವಾರದ ಬಳಿಕ ಸಾಮಾನ್ಯ ವರ್ಗದ ಶಿಕ್ಷಕರ ನೇಮಕಾತಿ ಮೊದಲ ಹಂತದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಈ ವೇಳೆ ಮಕ್ಕಳೊಂದಿಗೆ ಕೆಲ ಹೊತ್ತು ಕಳೆದು, ಅವರಲ್ಲಿ ಶಾಲಾಚಟುವಟಿಕೆಗಳ ಬಗ್ಗೆ ಪ್ರಶ್ನೋತ್ತರ ನಡೆಸಿದರು. ಶಾಲೆಯ ಬೇಡಿಕೆಗಳ ಕುರಿತು ಆಡಳಿತ ಸಮಿತಿಯೊಂದಿಗೆ ಚರ್ಚಿಸಿದರು. ಶಾಲೆಯಲ್ಲಿ ಈಗಾಗಲೆ 11 ತರಗತಿಗಳು ನಡೆಯುತ್ತಿವೆ. ಪ್ರಸಕ್ತ 8 ಕೊಠಡಿಗಳಿವೆ, ಅವಶ್ಯಕ ಹೆಚ್ಚುವರಿ ಮೂರು ಕೊಠಡಿಗಳ ಅಗತ್ಯತೆ ಕುರಿತು ಶಾಲಾಭಿವೃದ್ಧಿ ಸಮಿತಿಯು ಸಚಿವರ ಬಳಿ ವಿನಂತಿಸಿದರು. ತಕ್ಷಣ ಸ್ಪಂದಿಸಿದ ಅವರು ಹೆಚ್ಚುವರಿ ಕೊಠಡಿಗೆ ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರಲ್ಲದೆ ಶಿಕ್ಷಣ ಇಲಾಖೆಯ ಪ್ರಿನ್ಸಿಪಲ್ ಸೆಕ್ರೆಟರಿಗೆ ದೂರವಾಣಿ ಮಾಡಿ ಶಾಲೆಯ ಬಗ್ಗೆ ವಿವರಿಸಿದರು.
ಇದೇ ಶಾಲೆಯ ವಿದ್ಯಾರ್ಥಿನಿ ಇತ್ತೀಚೆಗೆ ತನ್ನ ವಿಶೇಷ ಸಾಧನೆಯಿಂದ ತಮಿಳುನಾಡಿನ ಏಷ್ಯಾ ವೇದಿಕ್ ಕಲ್ಚರ್ ವಿಶ್ವವಿದ್ಯಾಲಯದಿಂದ ಅತೀ ಕಿರಿಯ ವಯಸ್ಸಿಗೆ 8 ನೇ ತರಗತಿ ವಿದ್ಯಾರ್ಥಿನಿ ಶೌರ್ಯಾ ಅವರು ಗೌರವ ಡಾಕ್ಷರೇಟ್ ಪದವಿ ಪಡೆದಿದ್ದು ಈಕೆಗೆ ಸಚಿವರು ಸಮ್ಮಾನಿಸಿ ಗೌರವಿಸಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್., ಶಿಕ್ಷಣ ಸಂಯೋಜಕ ಸುಭಾಶ್ ಜಾದವ್, ಸಿ.ಆರ್.ಪಿ. ಪ್ರತಿಮಾ ಕೆ.ಎಂ., ಶಾಲಾ ಮುಖ್ಯೋಪಾಧ್ಯಾಯಿನಿ ಫ್ಲೇವಿಯಾ ಡಿಸೋಜಾ, ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ ರಾವ್, ಮಾಜಿ ಮಂಡಲ ಪ್ರಧಾನ ಸುಂದರ ಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ನಂದ ಭಟ್, ಮಾಜಿ ಅಧ್ಯಕ್ಷರಾದ ರಾಜೇಂದ್ರ ಅಜ್ರಿ, ಪ್ರಭಾಕರ ಗೌಡ ಬೊಳ್ಮ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಮನೋಹರ್ ರಾವ್, ಉಳಿದಂತೆ ಪ್ರಮುಖ ಹಿರಿಯ ವಿದ್ಯಾರ್ಥಿ ಸುದರ್ಶನ್ ಕೆ.ವಿ., ಗ್ರಾ.ಪಂ. ಸದಸ್ಯ ಹರೀಶ್ ಸುವರ್ಣ, ವಸಂತ ನಾಯ್ಕ್, ಶಿಕ್ಷಕರು ಉಪಸ್ಥಿತರಿದ್ದರು.