ಮಂಗಳೂರು: ಜರ್ಮನಿಯ ವ್ಯೂರ್ತ್ಯ್ ಬುರ್ಗ್ ವಿಶ್ವವಿದ್ಯಾನಿಲಯ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ನಡುವೆ ಶೈಕ್ಷಣಿಕ ಒಡಂಬಡಿಕೆ ಒಪ್ಪಂದವನ್ನು ಪುನಶ್ಚೇತನಗೊಳಿಸಲು ಮತ್ತು ಶೈಕ್ಷಣಿಕ ವಿನಿಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಜರ್ಮನಿಯ ವ್ಯೂರ್ತ್ಯ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಕಾರೀನ್ ಸ್ಟೈನರ್ ಹಾಗು ಸಹಾಯಕ ಪ್ರಾಧ್ಯಾಪಕರಾದ ಡಾ. ಕತ್ರಿನ್ ಹೋಲ್ಜ್ ಇವರು ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಇವರ ಅಧ್ಯಕ್ಷತೆಯಲ್ಲಿ ಹಾಗು ಜರ್ಮನಿಯ ವ್ಯೂರ್ತ್ಯ್ ಬುರ್ಗ್ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರು ಹಾಗು ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ಎ ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗು ಯೋಗ ವಿಜ್ಞಾನ ವಿಭಾಗದ ಪ್ರಾಧ್ಯಾಪಕರುಗಳ ಜೊತೆಗೆ ಸಮಾಲೋಚನ ಸಭೆ ನಡೆಯಿತು. ಈ ಎರಡೂ ವಿಭಾಗಗಳ ಜೊತೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅರಿವನ್ನು ವಿಸ್ತರಿಸುವ ಕಾರ್ಯಯೋಜನೆಗಳನ್ನು ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜರ್ಮನಿಯ ವ್ಯೂರ್ತ್ಯ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಕಾರೀನ್ ಸ್ಟೈನರ್ ಎರಡೂ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಒಡಂಬಡಿಕೆಯ ಸಾಧ್ಯತೆಯ ಕುರಿತು ವಿವರಣೆ ನೀಡಿದರು.
ಪ್ರೊ. ಬಿ.ಎ ವಿವೇಕ ರೈ ಇವರು ಮಾತನಾಡಿ ಕನ್ನಡ-ತುಳು ಸಾಹಿತ್ಯ, ಜಾನಪದ ಹಾಗು ಯೋಗ ವಿಜ್ಞಾನದ ಕ್ಷೇತ್ರದಲ್ಲಿ ಎರಡೂ ವಿಶ್ವವಿದ್ಯಾನಿಲಯಗಳು ಜೊತೆಗೂಡಿ ಕಾರ್ಯನಿರ್ವಹಿಸಲು ಅವಕಾಶವಿದೆ ಎಂದು ಜರ್ಮನಿಯ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಭೇಟಿ ಕೊಟ್ಟಾಗಿನ ಅನುಭವದ ಹಿನ್ನಲೆಯಿಂದ ಮಾತನಾಡಿದರು. ಕುಲಪತಿಗಳಾದ ಪ್ರೊ. ಪಿ.ಎಸ್. ಯಡಪಡಿತ್ತಾಯ ಇವರು ಒಡಂಬಡಿಕೆಯ ವಿವರಗಳನ್ನು ವಿವರಿಸಿ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡಗಿಕೊಳ್ಳುವವರಿಗೆ ಸಂಪೂರ್ಣ ಸಹಕಾರವನ್ನು ಒದಗಿಸುವುದಾಗಿ ಹೇಳಿದರು.
ಸಮಾಲೋಚನ ಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕಿಶೋರ್ ಕುಮಾರ್ ಸಿ.ಕೆ., ಹಣಕಾಸು ಅಧಿಕಾರಿಗಳಾದ ಪ್ರೊ. ಕೆ.ಎಸ್. ಜಯಪ್ಪ, ಯೋಗ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಪ್ರೊ. ಕೆ. ಕೃಷ್ಣ ಶರ್ಮ, ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಸೋಮಣ್ಣ ಹೊಂಗಳ್ಳಿ, ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಮತ್ತಿತರರು ಭಾಗವಹಿಸಿದರು.
ಸಮಾಲೋಚನ ಸಭೆಯ ಬಳಿಕ ಜರ್ಮನಿಯ ತಂಡ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ, ಯೋಗ ವಿಜ್ಞಾನ ವಿಭಾಗ, ಕನ್ನಡ ವಿಭಾಗದ ಸಾಂಸ್ಕೃತಿಕ ವಸ್ತುಸಂಗ್ರಹಾಲಯ ಹಾಗು ಯಕ್ಷಗಾನ ಅಧ್ಯಯನ ಕೇಂದ್ರ ಮ್ಯೂಸಿಯಂಗೆ ಭೇಟಿ ನೀಡಿದರು.