ಉಜಿರೆ: ಶ್ರೀ ಧ. ಮಂ. ಕಾಲೇಜು ಉಜಿರೆ ಇಲ್ಲಿನ ಎನ್. ಎಸ್.ಎಸ್ ಘಟಕಗಳ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಕಾಲೇಜಿನ ದತ್ತು ಶಾಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತ್ತೋಡಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ರಮೇಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ನೀರಚಿಲುಮೆಯ ಸರಕಾರಿ ಶಾಲೆಯಲ್ಲೂ ಎನ್. ಸಿ. ಸಿ ನೇವಿ ವಿಂಗ್ ನ ಸಂಯುಕ್ತ ಆಶ್ರಯದಲ್ಲಿ ಗಿಡ ನೆಡಲಾಯಿತು.
ಅಲ್ಲಿ ನೇವಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಭಟ್ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸ್ವಯಂಸೇವಕರು ಶಾಲಾ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆಯ ಕಾರ್ಯಗಳನ್ನು ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಎನ್.ಎಸ್.ಎಸ್ ನ ಯೋಜನಾಧಿಕಾರಿ ಡಾ. ಲಕ್ಷ್ಮಿ ನಾರಾಯಣ ಕೆ. ಎಸ್ ಪ್ರತಿಯೊಬ್ಬರೂ ಗಿಡ ನೆಡುವ, ಪೋಷಿಸುವ ಹಾಗೂ ಪರಿಸರ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡು ವೈಯಕ್ತಿಕ ನೆಲೆಯಲ್ಲಿ ಕಾರ್ಯಪ್ರವೃತ್ತರಾಗಬೇಕು, ಆಗಲಷ್ಟೇ ಪ್ರಕೃತಿ ಸಂರಕ್ಷಣೆ ಸಾಧ್ಯ ಎಂದು ಕರೆ ನೀಡಿದರು.
ಈ ಸಂದರ್ಭ ಶಿಬಿರವಾಣಿ ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು ಹಾಗೂ ಸ್ವಯಂಸೇವಕರಿಗೆ, “ಇರುವ ಒಂದೇ ಭೂಮಿಯನ್ನು ರಕ್ಷಿಸಿ” ಎಂಬ ವಿಷಯದ ಬಗ್ಗೆ ಕಿರು ಪ್ರಹಸನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ದೀಪಾ ಆರ್. ಪಿ ಹಾಗೂ ಸ್ವಯಂಸೇವಕರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಸ್ವಯಂಸೇವಕಿ ವಂದಿತ ಸ್ವಾಗತಿಸಿದರು, ಪೂಜಶ್ರೀ ವಂದಿಸಿದರು, ವರುಣ್ ಕಾರ್ಯಕ್ರಮ ನಿರೂಪಿಸಿದರು.