ಬೆಳ್ತಂಗಡಿ: ಭಾರತೀಯ ಮೌಲ್ಯಗಳನ್ನು ಭಾರತೀಯ ಭಾಷೆಗಳ ಮೂಲಕ ನಮ್ಮ ಮಕ್ಕಳಿಗೆ ಹೇಳಿಕೊಟ್ಟಾಗ ಮಾತ್ರ ನಮ್ಮತನ ಉಳಿಯಲು ಸಾಧ್ಯ. ಈ ಕಾರ್ಯವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಮಾಡುತ್ತಾ ಬರುತ್ತಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್ ಹೇಳಿದರು.
ಅವರು, ಬುಧವಾರ ಸುಲ್ಕೇರಿ ಶ್ರೀರಾಮ ಶಾಲೆಯ ನೂತನ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರುವಿದೇಶಿಯರ ಆಕ್ರಮಣ ಸತತವಾಗಿ ಆಗಿದ್ದರೂ ಭಾರತೀಯತೆ ನಾಶವಾಗಿಲ್ಲ. ಆದರೂ ನಾವು ಪರಕೀಯರನ್ನು ನೋಡುತ್ತಾ ಅವರಂತೆ ನಮ್ಮ ಬದುಕು, ಚಿಂತನೆಗಳನ್ನು ರೂಪಿಸಿಕೊಳ್ಳುತ್ತಾ ಬರುತ್ತಿರುವುದು ದುರಂತ. ಭಾರತೀಯ ಮೌಲ್ಯಗಳು ಜಗತ್ತಿನಲ್ಲೇ ಸರ್ವಶ್ರೇಷ್ಠ. ಅದರ ಬೇರುಗಳನ್ನು ಇನ್ನಷ್ಟು ಆಳಕ್ಕೆ ಇಳಿಸಬೇಕು ಎಂಬ ಉದ್ದೇಶದಿಂದ ದೇಶಾದ್ಯಂತ ವಿದ್ಯಾಭಾರತಿ ಸಂಸ್ಥೆಯು ಕೆಲಸ ಮಾಡುತ್ತಿದೆ. ಇದರಡಿಯಲ್ಲಿ ವಿದ್ಯಾವರ್ಧಕ ಸಂಘವೂ ಇದ್ದು ಸುಲ್ಕೇರಿಯ ಶಾಲೆಯು ಮೌಲ್ಯಯುತ ಶಿಕ್ಷಣ ನೀಡಲು ಸಿದ್ಧಗೊಂಡಿದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವಲ್ಲಿ ಮೊದಲ ಸ್ಥಾನದಲ್ಲಿರಬೇಕು ಎಂಬ ರಾಜ್ಯಸರಕಾರವು ಉದ್ಧೇಶವಾಗಿದ್ದು, ಅದಕ್ಕೆ ತಕ್ಕಂತೆ ಸಂಘದ ಶಾಲೆಗಳಲ್ಲಿ ಮುಂದಿನ ವರ್ಷದಿಂದ ಹೊಸ ನೀತಿಯ ಅನುಸಾರ 9ನೇ ತರಗತಿಯಿಂದ ಶಿಕ್ಷಣ ನೀಡಲು ಚಿಂತನೆ ನಡೆಸಲಾಗುತ್ತಿದ ಎಂದರು.
ಶಾಸಕ ಹರೀಶ ಪೂಂಜ ಅವರು, ಸುಲ್ಕೇರಿ ಶಾಲೆಯ ಕಟ್ಟಡ ಎದ್ದು ನಿಲ್ಲಲು ಹಲವಾರು ಮಂದಿ ಶ್ರಮದಾನ ಮಾಡಿರುವುದು ಉಲ್ಲೇಖನೀಯ. ತಾಲೂಕಿನಲ್ಲಿ ಶಾಲೆಯು ಶಕ್ತಿಕೇಂದ್ರವಾಗಿ ಬೆಳೆಯಬೇಕು ಎಂಬ ಹಿರಿಯರ ಅಪೇಕ್ಷೆಗೆ ನಾನೂ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎಂದರು.
ಈ ಸಂದರ್ಭ ಅಳದಂಗಡಿ ಸತ್ಯದೇವತಾ ದೈವಸ್ಥಾನದ ವತಿಯಿಂದ ಶಾಲೆಯ ಎಲ್ಲಾ ಮಕ್ಕಳಿಗೆ ಬರೆಯವ ಪುಸ್ತಕಗಳನ್ನು ಉಚಿತವಾಗಿ ದೈವಸ್ಥಾನದ ಆಡಳಿತೆದಾರ ಶಿವಪ್ರಸಾದ ಅಜಿಲರು, ಡಾ. ಭಟ್ ಅವರ ಮೂಲಕ ವಿತರಿಸಿದರು.
ಶಾಲಾ ಆಡಳಿತ ಮಂಡಳಿ ಗೌರವಾಧ್ಯಕ್ಷ ಗಣೇಶ ಹೆಗ್ಡೆ ನಾರಾವಿ, ಅಧ್ಯಕ್ಷ ರಾಜು ಪೂಜಾರಿ, ಸಹ ಕಾರ್ಯದರ್ಶಿ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಸಮಿತಿ ಕೋಶಾಧಿಕಾರಿ ಪ್ರಕಾಶ ಶೆಟ್ಟಿ ನೊಚ್ಚ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯದರ್ಶಿಶಶಿಧರ ಅಳದಂಗಡಿ ವಂದಿಸಿದರು.
ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಶ್ರೀರಾಮ ಶಾಲೆಯಲ್ಲಿ 37 ಮಕ್ಕಳಿದ್ದರು. ಇದೀಗ 500 ಕ್ಕಿಂತಲೂ ಮಿಕ್ಕಿ ಮಕ್ಕಳಿದ್ದಾರೆ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಆಕರ್ಷಕವಾಗಿ 12 ಕೊಠಡಿ ಹಾಗೂ ಸಭಾಭವನದ ನಿರ್ಮಾಣವಾಗಿದೆ.
ಪ್ರವೇಶೋತ್ಸವದ ಪ್ರಯುಕ್ತ ಮಂಗಳವಾರ ರಾಕ್ಷೋಘ್ನ ಹೋಮ, ವಾಸ್ತು ಬಲಿ, ಪೂಜೆ; ಬುಧವಾರ ಸರಸ್ವತಿ ಹೋಮ, ಗಣಹವನ ಹಾಗೂ ಪ್ರವೇಶೋತ್ಸವನ್ನು ಪುರೋಹಿತ ಕೇಮೊಟ್ಟು ಪ್ರಭಾಕರ ಮಂಜಿತ್ತಾಯ ನಿರ್ವಹಿಸಿದರು.
ನಮ್ಮ ದೇಶಕ್ಕಾಗಿ ಬದುಕಿ ಪ್ರಾಣಕೊಟ್ಟವರ ಸ್ಮರಣೆ ನಮ್ಮ ಮಕ್ಕಳಿಗಾಗಬೇಕು. ಸಮಾಜಕ್ಕೋಸ್ಕರ ಬದುಕುವುದು ಹೇಗೆ, ಇನ್ನೊಬ್ಬರಿಗೆ ಸಹಕಾರ ಮಾಡಬೇಕು ಎಂಬ ಕಲ್ಪನೆ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಇಲ್ಲದಿರುವುದು ಬೇಸರದ ಸಂಗತಿ. ಅದರ ಕೊರತೆಯನ್ನು ನಿವಾರಿಸುವಲ್ಲಿ ವಿದ್ಯಾವರ್ಧಕ ಸಂಘ ಶ್ರಮಿಸುತ್ತಿದೆ – ಡಾ. ಭಟ್