ಉಜಿರೆ : ಶ್ರೀ ಧ. ಮಂ. ಕಾಲೇಜ್ ನ ಯಕ್ಷಗಾನ ತಂಡವು ಇತ್ತೀಚೆಗೆ ಮಂಗಳೂರಿನ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನದ ಗರಿಮೆಗೆ ಪಾತ್ರವಾಗಿದೆ.
ಶ್ರೀ ಧ. ಮಂ. ಕಾನೂನು ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ತನ್ನ ತ್ರಿಂಶತಿ ಯಕ್ಷ ಸಂಭ್ರಮದ ಅಂಗವಾಗಿ ‘ಯಕ್ಷೋತ್ಸವ- ೨೦೨೨’ನ್ನು ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ಒಟ್ಟು ೧೨ ತಂಡಗಳು ಭಾಗವಹಿಸಿದ್ದು ಎಸ್.ಡಿ.ಎಂ ಕಾಲೇಜು ‘ಸುದರ್ಶನ ವಿಜಯ’ ಪ್ರಸಂಗವನ್ನು ಪ್ರದರ್ಶಿಸಿತ್ತು.
ಈ ಪ್ರಸಂಗದಲ್ಲಿ ಹಿಮ್ಮೇಳ ಭಾಗವತರಾಗಿ ಜಯರಾಮ ಅಡೂರು, ಚೆಂಡೆಯಲ್ಲಿ ಆನಂದ ಗುಡಿಗಾರ್, ಮದ್ದಳೆ ಶ್ರೇಯಸ್ ಪಾಳಂದೆ ಹಾಗೂ ಚಕ್ರ ತಾಳದಲ್ಲಿ ಆದಿತ್ಯ ಹೊಳ್ಳ ಸಹಕರಿಸಿದ್ದರು. ಮುಮ್ಮೆಳದಲ್ಲಿ ದೇವೇಂದ್ರನಾಗಿ ಪರೀಕ್ಷಿತ್ ಗೋಖಲೆ, ದೇವೇಂದ್ರರಾಗಿ ಮೋನಿಷಾ ಕೆ. ಎಲ್. , ಮತ್ತು ಸೌಜನ್ಯ, ಸುದರ್ಶನನಾಗಿ ಶ್ರೀಶಾ ನಾರಾಯಣ ಜಿ ಹೆಗ್ಡೆ, ಶತ್ರುಪ್ರಸೂದನನಾಗಿ ಸುದಿತ್ ಆಚರ್ಯ, ವಿಷ್ಣುವಾಗಿ ರೂಪೇಶ್ ಆಚರ್ಯ, ಲಕ್ಷ್ಮಿಯಾಗಿ ರಕ್ಷಿತಾ ಆರ್. ಎಸ್. ಹಾಸ್ಯಗಾರನಾಗಿ ಸುಬ್ರಮಣ್ಯ ಅಭಿನಯಿಸಿದ್ದರು.
ಯಕ್ಷಗಾನ ಕಲಾವಿದರಾದ ಸರ್ಪಂಗಳ ಈಶ್ವರ ಭಟ್, ಚಂದ್ರಶೇಖರ್ ಕೊಂಕಣಾಜೆ, ಖ್ಯಾತ ಭಾಗವತರಾದ ಹರಿಪ್ರಸಾದ್ ಕಾರಂತ ತೀರ್ಪುಗಾರರಾಗಿ ಭಾಗವಹಿಸಿದ್ದರು. ಈ ಬಗ್ಗೆ ಪ್ರಾಂಶುಪಾಲರು ಹಾಗೂ ಕಾಲೇಜಿನ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ.