ಭೋಪಾಲ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನ ತೆರಿಗೆಗಳ ಅಮ್ಮ ಎಂದು ಬಹಳ ಜನರು ಟ್ರೋಲ್ ಮಾಡುವುದುಂಟು. ತೆರಿಗೆ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿರುವ ನಿರ್ಮಲಾ ಸೀತಾರಾಮನ್, ಈ ಬಾರಿಯ ಬಜೆಟ್​ನಲ್ಲಿ ಒಂದಷ್ಟು ತೆರಿಗೆ ಏರಿಕೆ ಮಾಡಿ ಟ್ರೋಲ್‌ ಗ್‌ ಒಳಗಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್​ನ (ಐಐಎಸ್​ಇಆರ್) 11ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಹಣಕಾಸು ಸಚಿವೆ, ತಮ್ಮ ತೆರಿಗೆ ಹೇರಿಕೆ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ಈ ತೆರಿಗೆಗಳು ಹೇಗೆ ಒಂದು ದೇಶದ ಅಭ್ಯುದಯಕ್ಕೆ ಕಾರಣವಾಗಬಲ್ಲುವು ಎಂಬುದನ್ನು ವಿವರಿಸಿದ್ದಾರೆ.

‘ನಮ್ಮ ತೆರಿಗೆಗಳು ಯಾಕೆ ಇಷ್ಟು ಇವೆ ಎಂದು ಜನರಿಗೆ ಉತ್ತರ ಹೇಳುವಾಗ ಹಣಕಾಸು ಸಚಿವೆಯಾಗಿ ಮುಜುಗರ ಆಗುತ್ತದೆ. ತೆರಿಗೆಯನ್ನು ಸೊನ್ನೆಗೆ ತರಬೇಕೆಂಬ ಮನಸ್ಸು ನನಗೂ ಇದೆ. ಆದರೆ, ದೇಶದ ಮುಂದೆ ಸಾಕಷ್ಟು ಸವಾಲುಗಳಿವೆ. ಈ ಸವಾಲುಗಳನ್ನು ನಾವು ಎದುರಿಸುವುದು ಅಗತ್ಯ,’ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

‘ಸರ್ಕಾರ ಕೇವಲ ಮಾತನಾಡುತ್ತಿಲ್ಲ. ತೆರಿಗೆಯಿಂದ ಬಂದ ಹಣವನ್ನು ಆರ್ ಅಂಡ್ ಡಿಗೆ ಹಾಕುತ್ತಿದೆ. ನನ್ನ ಕೆಲಸ ಜನರಿಗೆ ತೊಂದರೆ ಕೊಡುವುದಲ್ಲ, ಆದರೆ, ಆದಾಯ ಸೃಷ್ಟಿಸುವುದು ಮಾತ್ರವೇ ನನ್ನ ಕೆಲಸ. ನಾವು ಸಂಶೋಧನೆಗೆ ಹಣ ತೊಡಗಿಸಬೇಕಾದ್ದರಿಂದ ಈ ತೆರಿಗೆ ಹಣ ಬೇಕು,’ ಎಂದು ಹಣಕಾಸು ಸಚಿವೆ ಅಭಿಪ್ರಾಯಪಟ್ಟಿದ್ದಾರೆ.

— Income Tax India (@IncomeTaxIndia) August 13, 2024