ಔರಾದ್: ರೋಗಿಗಳಿಗೆ ಗುಣಮಟ್ಟದ ಸೇವೆ ನೀಡುವಲ್ಲಿ ಕಾಳಜಿ ವಹಿಸಬೇಕು ಎಂದು ಶಾಸಕ ಪ್ರಭು ಚವಾಣ್ ಸೂಚನೆ ನೀಡಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಇದು ಗಡಿ ಭಾಗದ ದೊಡ್ಡ ಆಸ್ಪತ್ರೆ. ದೂರ ದೂರದಿಂದ ರೋಗಿಗಳು ಬರುತ್ತಾರೆ. ಸರ್ಕಾರ ಕೊಡುವ ಎಲ್ಲ ಸೌಲಭ್ಯ ಅವರಿಗೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ಹೊರಗಿನ ಔಷಧಿ ಬರೆದುಕೊಡಬಾರದು.
ಎಲ್ಲದಕ್ಕೂ ಬೀದರ್ಗೆ ಕಳುಹಿಸುವ ರೂಢಿ ಹೋಗಬೇಕು. ನೀವು ಮನಸ್ಸು ಮಾಡಿದರೆ ಗಂಭೀರ ಸ್ವರೂಪದ ರೋಗಗಳನ್ನು ಗುಣಪಡಿಸಬಹುದು ಎಂದು ವೈದ್ಯರಿಗೆ ತಿಳಿಸಿದರು. ಆಸ್ಪತ್ರೆಗೆ ₹19 ಲಕ್ಷ ವೆಚ್ಚದಲ್ಲಿ ಪೂರೈಕೆಯಾದ ವಿವಿಧ ಸಲಕರಣೆಗಳು ಪರಿಶೀಲಿಸಿದರು.
ವಿವಿಧ ಕಾಮಗಾರಿ ಚಾಲನೆ: ಶಾಸಕ ಚವಾಣ್ ಅವರು ಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು. ದೇಶಮುಖ ಗಲ್ಲಿಯಲ್ಲಿ ಅಂಗನವಾಡಿ ಕಟ್ಟಡ, ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಕೊಠಡಿಗಳ ನಿರ್ಮಾಣ, ಪದವಿ ಕಾಲೇಜು ಹೆಚ್ಚುವರಿ ಕೊಠಡಿ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದರು. ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಕೋರ್ಟ್ ಕಟ್ಟಡ ಕಾಮಗಾರಿ ಪರಿಶೀಲಿಸಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ, ಎಂಜಿನಿಯರ್ ರಮೇಶ ಕೋಟೆ, ಮುಖಂಡ ರಾಮ ನರೋಟೆ, ಅಶೋಕ ಅಲ್ಮಾಜೆ, ಶೇಷರಾವ, ಕೇರಬಾ ಪವಾರ್, ರಾಮಶೆಟ್ಟಿ ಪನ್ನಾಳೆ, ಸಂತೋಷ ಪೋಕಲವಾರ, ಶಿವರಾಜ ಅಲ್ಮಾಜೆ ಮತ್ತಿತರರು ಇದ್ದರು.

