ಬೀದರ್ : ಹನ್ನೆರಡು ಜ್ಯೋತಿರ್ಲಿಂಗಗಳ ಯಾತ್ರೆ ಕೈಗೊಂಡಿರುವ ತುಮಕೂರಿನ ಶಿವಾನಂದ ಅವರು ಮಂಗಳವಾರ ನಗರ ತಲುಪಿದರು. ತುಮಕೂರು ಜಿಲ್ಲೆಯ ಬೆಳ್ಳಾವಿ ಗ್ರಾಮದ ಶ್ವೇತ ಕಮಠಾಪುರಿಯಿಂದ ಆರಂಭಗೊಂಡ ಬೈಸಿಕಲ್‌ ಯಾತ್ರೆ ಜೂನ್‌ 2ರಿಂದ ಆರಂಭಿಸಿದ್ದಾರೆ. ಮಂಗಳವಾರ ನಗರದಲ್ಲಿ ನರಸಿಂಹ ಝರಣಿ, ಗುರುದ್ವಾರ ಹಾಗೂ ಪಾಪನಾಶ ದೇವಸ್ಥಾನದ ದರ್ಶನ ಪಡೆದುಕೊಂಡು ಮುಂದೆ ಸಾಗಿದರು.

’12 ಜ್ಯೋತಿರ್ಲಿಂಗಗಳ ಬೈಸಿಕಲ್‌ ಯಾತ್ರೆ ಒಟ್ಟು 13 ಸಾವಿರ ಕಿ.ಮೀ ಒಳಗೊಂಡಿದೆ. ಕರ್ನಾಟಕದಿಂದ ಆಂಧ್ರ ಪ್ರದೇಶದ ಶ್ರೀಶೈಲ, ಮಹಾರಾಷ್ಟ್ರ, ಗುಜರಾತ್‍, ಮಧ್ಯಪ್ರದೇಶ, ಜಾರ್ಖಂಡ್‌ ಮಾರ್ಗವಾಗಿ ಅಂತಿಮವಾಗಿ ವಾರಣಸಿ, ಕೇದಾರನಾಥಕ್ಕೆ ಹೋಗಿ ಕೊನೆಗೊಳಿಸಲಾಗುವುದು. ಇದುವರೆಗೆ 2,300 ಕಿ.ಮೀ ಯಾತ್ರೆ ಪೂರೈಸಿದ್ದೇನೆ’ ಎಂದು ಶಿವಾನಂದ ಹೇಳಿದರು.