ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೊಂದಾಣಿಕೆ ರಾಜಕಾರಣ ನಡೆದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಯಾವ ಹೊಂದಾಣಿಕೆ ರಾಜಕಾರಣವೂ ನಡೆದಿಲ್ಲ. ಎಲ್ಲವೂ ಸುಳ್ಳು. ರಾಜ್ಯದಲ್ಲಿ ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿದೆ ಎನ್ನುವ ಕೆಲವು ನಾಯಕರ ಆರೋಪದ ಬಗ್ಗೆ ಮಾತನಾಡಿದ ಅವರು, ಚುನಾವಣೆ ಹೊತ್ತಿನಲ್ಲಿ ತಳಮಟ್ಟದ ಪರಿಸ್ಥಿತಿಯನ್ನು ಸರಿಯಾಗಿ ಅರಿಯಲು ಆಗಲಿಲ್ಲ.

ಎಲ್ಲಾ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ. ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡಲಿ ಎಂದು ನಾವೇ ಒಂದಷ್ಟು ಜನ ಮಂತ್ರಿಗಳಿಗೆ ತಮ್ಮ ಕುಟುಂಬದ ಸದಸ್ಯರನ್ನು ಚುನಾವಣೆಗೆ ನಿಲ್ಲಿಸಿ ಎಂದು ಹೇಳಿದ್ದೆವು. ಇದರಲ್ಲಿ ಒಂದಷ್ಟು ಜನ ಗೆದ್ದಿದ್ದಾರೆ. ಒಂದಷ್ಟು ಜನ ಸೋತಿದ್ದಾರೆ. ಮುಂದಕ್ಕೆ ಇವರುಗಳು ಪಕ್ಷಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ, ಬೆಳೆಯುತ್ತಾರೆ ಎಂದು ಹೇಳಿದರು.

ಎಲ್ಲಾ ಕಾರ್ಯಕರ್ತರು, ಮುಖಂಡರು, ಗೆದ್ದವರು, ಸೋತವರು ಎಲ್ಲರು ಸೇರಿ ಎಐಸಿಸಿ ಸತ್ಯಶೋದನಾ ಸಮಿತಿಗೆ ಪರಿಸ್ಥಿತಿ ಅರಿಯಲು ಅಹವಾಲು ಸಲ್ಲಿಸಿದ್ದೆವು. ಅದರಂತೆ ಎಲ್ಲರು ಸಮಿತಿಯ ಮುಂದೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಮುಂದಕ್ಕೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.