ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣದ ಆರೋಪ ಮುಳ್ಳಾಗಿದ್ದು, ನಾಳೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಾಹ್ನ 12ಗಂಟೆಗೆ ಮಹತ್ವದ ತೀರ್ಪು ಪ್ರಕಟ ಮಾಡುವ ಸಾಧ್ಯತೆ ಇದೆ.

ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ ಹೊರ ಬೀಳಲಿದ್ದು, ಇಡೀ ರಾಜ್ಯದ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ. ಸಿಎಂ ಸಿದ್ದರಾಮಯ್ಯ ಕುಟಂಬಸ್ಥರ ಮೇಲೆ ಪ್ರಭಾವ ಬಳಸಿ ಮೈಸೂರಿನ ಮುಡಾದಲ್ಲಿ ಅಕ್ರಮವಾಗಿ ಸೈಟು ಪಡೆದ ಗಂಭೀರ ಆರೋಪ ಕೇಳಿ ಬಂದಿದೆ.

ಈ ಪ್ರಕರಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಈ ಪ್ರಾಸಿಕ್ಯೂಷನ್‌ ಅನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಹೈಕೋರ್ಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮುಡಾ ಕೇಸ್‌ನ ಅರ್ಜಿಯ ವಿಚಾರಣೆ ನಡೆದಿತ್ತು. ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ, ಪ್ರೋ ‌ರವಿ ವರ್ಮ ಕುಮಾರ್ ವಾದಿಸಿದ್ದರು. ಗವರ್ನರ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು.

ಅರ್ಜುದಾರರ ಪರ ಮನ್ವಿಂದರ್ ಸಿಂಗ್, ಲಕ್ಷ್ಮಿ ಅಯ್ಯಾಂಗಾರ್, ಪ್ರಭುಲಿಂಗ ನಾವದಗಿ, ರಂಗನಾಥ್ ರೆಡ್ಡಿ, ರಾಘವನ್ ವಾದಿಸಿದ್ದರು. ಕಳೆದ ಸೆಪ್ಟೆಂಬರ್ 12 ರಂದು ಎರಡು ಕಡೆಯ ವಾದ ಆಲಿಸಿದ್ದ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿತ್ತು