ಬೆಂಗಳೂರು: ಲಾರಿ ಚಾಲಕನ ನಿರ್ಲಕ್ಷ್ಯದಿಂದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಇಂದು ನಸುಕಿನ ಜಾವ 1:30ರ ವೇಳೆಗೆ ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ನಡೆದಿದೆ.

ಎಂ ಸ್ಯಾಂಡ್ ಲಾರಿ ಚಾಲಕ ನಿದ್ದೆ ಕಣ್ಣಿನಲ್ಲಿ ಟಿಪ್ಪರ್ ಎತ್ತಿದ್ದಾನೆ. ಈ ವೇಳೆ ಲಾರಿ ಟಾಪ್‌ಗೆ ವಿದ್ಯುತ್ ವೈರ್ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸದೆ ಚಾಲಕ ಲಾರಿ ಚಲಾಯಿಸಿದ್ದಾನೆ. ಈ ಪರಿಣಾಮ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಖಂಗೊಂಡು ನೆಲಕ್ಕುರಿಳಿವೆ.

ಚಿಕ್ಕಬಾಣಾವರ ಮುಖ್ಯರಸ್ತೆಯಲ್ಲೇ ಕಂಬಗಳು ಬಿದ್ದಿದ್ದು, ರಸ್ತೆ ತುಂಬೆಲ್ಲಾ ಲಾರಿಯಲ್ಲಿದ್ದ ಎಂ ಸ್ಯಾಂಡ್ ಬಿದ್ದಿದೆ. ಸದ್ಯ ಜೆಸಿಬಿ ಮುಖಾಂತರ ರಸ್ತೆಗೆ ಬಿದ್ದಿದ್ದ ಎಂ ಸ್ಯಾಂಡ್ ತೆರವುಗೊಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಗೆ ಕಾರಣವಾಗಿದ್ದ ಲಾರಿ ಚಾಲಕ ಮಣಿಯನ್ನು ಚಿಕ್ಕಬಾಣಾವರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.