ಬೆಂಗಳೂರು: ಆನ್‌ಲೈನ್‌ ಗೇಮ್‌ಗಳಿಗೆ ಕಡಿವಾಣ ಹಾಕಬೇಕು ಎಂದು ಕೇಂದ್ರ ಸಚಿವ ಅಮಿತ್ ಶಾಗೆ ಪತ್ರ ಬರೆದಿರುವ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಭೇಟಿಗೆ ಅವಕಾಶ ನೀಡುವಂತೆಯೂ ಮನವಿ ಮಾಡಿದ್ದಾರೆ.

ಆನ್‌ಲೈನ್‌ ಗೇಮ್‌ಗಳ ಜಾಲಕ್ಕೆ ಸಿಲುಕಿ ಮಕ್ಕಳು ಮತ್ತು ಯುವಕರು ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಿ. ಇಂತಹ ಆಟಗಳಲ್ಲಿ ಜೂಜಿಗೆ ಹಣ ಇಟ್ಟು ಹಲವು ಕುಟುಂಬಗಳು ಬೀದಿಗೆ ಬಂದಿವೆ. ಆದರೆ, ಅಂತಹ ಗೇಮ್‌ಗಳು ಮತ್ತು ಆ್ಯಪ್‌ಗಳ ಮಾಲೀಕರು ಲಾಭ ಮಾಡಿಕೊಂಡು ಐಷಾರಾಮ ಜೀವನ ನಡೆಸುತ್ತಿದ್ದಾರೆ. ಇದನ್ನು ತಪ್ಪಿಸುವ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.