ನವದೆಹಲಿ: ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗಣಾ ರಣಾವತ್ಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಘಟನೆ ಬಳಿಕ ಕುಲ್ವಿಂದರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಕುಲ್ವಿಂದರ್ ಇನ್ನು ಸೇವೆಗೆ ಮರಳಿಲ್ಲ. ಚಂಡೀಗಢ ಏರ್ಪೋರ್ಟ್ನಲ್ಲಿ ಕಂಗನಾ ರಣಾವತ್ ಅವರ ಮೇಲೆ ಕುಲ್ವಿಂದರ್ ಆಕ್ರಮಣಕಾರಿಯಾಗಿ ದಾಳಿ ನಡೆಸಿ ಕಪಾಳಕ್ಕೆ ಏಟು ನೀಡಿದ್ದರು. ದೆಹಲಿ ರೈತರ ಪ್ರತಿಭಟನೆಯನ್ನು ಟೀಕಿಸಿದ್ದಕ್ಕೆ ಹೊಡೆದಿದ್ದೇನೆ ಎಂದು ಕುಲ್ವಿಂದರ್ ಹೇಳಿಕೊಂಡಿದ್ದರು.
ಸಂಸದೆ ಮೇಲಿನ ಸಂಬಂಧ ವಿಶೇಷ ತನಿಖಾದಳ ತಂಡವನ್ನು ರಚಿಸಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿರುವ ಎಸ್ಐಟಿ ತಂಡ ವರದಿಯನ್ನು ಉನ್ನತ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದೆ. ಆದರೆ ಈ ಕುರಿತು ಎಸ್ಐಟಿ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
7ನೇ ಜೂನ್ 2024ರಂದು ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಚಂಡೀಗಢ್ನಿಂದ ದೆಹಲಿಗೆ ಹೊರಟಿದ್ದರು. ಚಂಡೀಗಢ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯದಲ್ಲಿದ್ದ ಕುಲ್ವಿಂದರ್ ನಟಿಗೆ ಕಪಾಳಮೋಕ್ಷ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

