ಬೆಂಗಳೂರು: ಮಾರ್ಚ್ 29 ರಿಂದ ಏಪ್ರಿಲ್ 1 ರವರೆಗೆ ಕೇರಳ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ಪ್ರಕಾರ, ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಬಿಸಿಲಿನ ತಾಪ ಇರಲಿದೆ. ಆದರೂ ಗಾಳಿಯಲ್ಲಿ ತೇವಾಂಶ ಇರೋದ್ರಿಂದ ಸೆಕೆಯ ತಾಪ ಸ್ವಲ್ಪ ಇಳಿಕೆ ಆಗಲಿದೆ. ಮುಂದಿನ 10 ದಿನ ಹವಾಮಾನ ಇದೇ ರೀತಿ ಮುಂದುವರಿಯಲಿದೆ ಎಂದಿದೆ.

ದೆಹಲಿಯ ಮಾಲಿನ್ಯ ಮಟ್ಟವು ಕೆಟ್ಟ ಸ್ಥಿತಿಯಲ್ಲೇ ಮುಂದುವರಿದಿದೆ. ಶುಕ್ರವಾರ ಸಂಜೆ 7 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕ (AQI) 263 ಕ್ಕೆ ದಾಖಲಾಗಿದೆ. ಗಾಳಿಯ ವೇಗ ಹೆಚ್ಚಾಗುವುದರಿಂದ ಮಾಲಿನ್ಯದ ಮಟ್ಟ ಸ್ವಲ್ಪ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ರಾಜಸ್ಥಾನದಲ್ಲಿ ಬಿಸಿಲಿನ ತಾಪ ಇರಲಿದೆ. ಗರಿಷ್ಠ ತಾಪಮಾನ 38 ರಿಂದ 40 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮಪಾತ ಮತ್ತು ಮಳೆ ಮುಂದುವರೆದಿದೆ. ಶ್ರೀನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹಿಮಪಾತವಾಗಿದೆ. ಇದರಿಂದ ಚಳಿ ಹೆಚ್ಚಾಗಲಿದೆ ಎಂದು ತಿಳಿಸಿದೆ. ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಲವು ನಗರಗಳು ತೀವ್ರ ಶಾಖಕ್ಕೆ ಒಳಗಾಗಲಿವೆ. ಹಿಸ್ಸಾರ್, ಗುರುಗ್ರಾಮ್, ಗ್ವಾಲಿಯರ್, ಇಂದೋರ್, ಭೋಪಾಲ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ತಾಪಮಾನ ವೇಗವಾಗಿ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.