ಬೆಂಗಳೂರು: ನಗರದ ಜನತೆಗೆ ಏಕಾಏಕಿ ವರುಣನ ರುಧ್ರಾವತಾರದಿಂದ ಬೆಚ್ಚಿಬಿದ್ದಾರೆ. ಕೆಲವು ದಿನಗಳಿಂದ ಶಾಂತ ರೂಪಿಯಾಗಿದ್ದ ವರುಣ,ಜೂನ್ ತಿಂಗಳ ಮೊದಲ ದಿನವಾದ ನಿನ್ನೆ (ಜೂ.01) ಯಿಂದಲೇ ಬೆಂಗಳೂರಿಗೆ ಆಗಮಿಸಿದ್ದಾನೆ. ಅದರಂತೆ ಇಂದು(ಜೂ.02) ಕೂಡ ಮುಂದುವರೆದಿದ್ದು, ನಗರದ ಹಲವೆಡೆ ಗಾಳಿ ಸಹಿತ ಮಳೆ(Rain) ಶುರುವಾಗಿದೆ. ಮೆಜೆಸ್ಟಿಕ್, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಶಾಂತಿನಗರ, ವಿಧಾನಸೌಧ, ಟೌನ್ಹಾಲ್, ಕೆ.ಆರ್.ಮಾರ್ಕೆಟ್ , ಕಾರ್ಪೊರೇಷನ್, ಶಿವಾಜಿನಗರ, ಯಲಹಂಕ ಸುತ್ತಮುತ್ತ ಭರ್ಜರಿ ಮಳೆ ಬಿಳುತ್ತಿದೆ.
ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಇತ್ತ ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತವಾಗಿದೆ. ಜೊತೆಗೆ ಬಿರುಗಾಳಿಗೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದೆ.ನಿರೀಕ್ಷೆಗೂ ಮೊದಲೇ ಭಾರತದ ದಕ್ಷಿಣ ರಾಜ್ಯವಾದ ಕೇರಳವನ್ನು ನೈಋತ್ಯ ಮಾನ್ಸೂನ್ ಪ್ರವೇಶ ಮಾಡಿದ್ದು, ಇವತ್ತು ಕರ್ನಾಟಕ ಗಡಿಗೆ ನೈಋತ್ಯ ಮಾನ್ಸೂನ್ ಪ್ರವೇಶ ಎಂಟ್ರಿ ಕೊಟ್ಟಿದೆ. ಜೊತೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಭಾಗದಲ್ಲಿ ಮಾನ್ಸೂನ್ ಪ್ರವೇಶವಾಗಿದೆ.

