ಬೆಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಗೃಹಿಣಿ ಸಾವನ್ನಪ್ಪಿರುವ ಘಟನೆ ಹುಳಿಮಾವಿನ ಅಕ್ಷಯನಗರದಲ್ಲಿ ನಡೆದಿದೆ.
ಅನುಷಾ ಮೃತ ಮಹಿಳೆ. ಎರಡು ದಿನದ ಹಿಂದೆ ಈ ಘಟನೆ ನಡೆದಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಅನುಷಾ ಇಂದು ಸಾವನ್ನಪ್ಪಿದ್ದಾರೆ. ಮೃತ ಅನುಷಾ ಅವರಿಗೆ 5 ವರ್ಷದ ಹಿಂದೆ ಶ್ರೀಹರಿ ಎಂಬಾತನ ಜೊತೆಗೆ ವಿವಾಹವಾಗಿತ್ತು. ಈ ದಂಪತಿಗೆ ಎರಡು ವರ್ಷದ ಮಗು ಕೂಡ ಇದೆ.
ಗಂಡನ ಮೇಲೆ ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಅನುಷಾ ಬಾತ್ ರೂಂನಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಗಂಡನ ಜೊತೆ ಜಗಳ ಮಾಡುತ್ತಿದ್ದ ಅನುಷಾಗೆ ಶ್ರೀಹರಿ ಡಿವೋರ್ಸ್ ಕೊಡುವಂತೆ ಪೀಡಿಸುತ್ತಿದ್ದನು. ಎರಡು ದಿನದ ಹಿಂದೆ ಅನುಷಾ, ಶ್ರೀಹರಿಗೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡಿದ್ದಾಳೆ. ಗಂಡ ಶ್ರೀಹರಿ ವಿಡಿಯೋ ಕಾಲ್ನಲ್ಲಿರುವಾಗಲೇ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾಳೆ ಎನ್ನಲಾಗಿದೆ.
ಅನುಷಾ ಪತಿ ನನಗೆ ಬೇರೆ ಸಂಬಂಧ ಇದೆ. ನನ್ನ ಬಿಟ್ಟು ಬಿಡು ಅಂತಿದ್ದನಂತೆ. ಮೂರು ತಿಂಗಳಿನಿಂದ ಡಿವೋರ್ಸ್ ಕೊಡುವಂತೆ ಪೀಡಿಸುತ್ತಿದ್ದ ಎಂದು ಮೃತಳ ಅಕ್ಕ ಉಷಾ ಹೇಳಿದ್ದಾರೆ. ಗಂಡನಿಗೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮಾಡುತ್ತಲೇ ಅನುಷಾ ಬೆಂಕಿ ಹಚ್ಚಿಕೊಂಡಿದ್ದಾರೆ. ಅನುಷಾ ಬೆಂಕಿ ಹಚ್ಚಿಕೊಳ್ಳೋದು ನೋಡಿದ್ರೂ ಶ್ರೀಹರಿ ಸುಮ್ಮನಾಗಿದ್ದ. ಅನುಷಾಳ ಕಾಪಾಡಬಹುದಿತ್ತು ಆದ್ರೂ ಕಾಪಾಡಿಲ್ಲ. ಸಾಯಲಿ ಅಂತಾನೇ ಸುಮ್ಮನೆ ಇದ್ದಾನೆ. ಮದುವೆ ಆದಾಗಿನಿಂದಲೂ ಚಿತ್ರಹಿಂಸೆ ನೀಡ್ತಾನೆ ಇದ್ದ ಎಂದು ಆರೋಪಿಸಿದ್ದಾರೆ.

