ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದ ಹಾಸ್ಟೆಲ್ ಬಳಿ ಮಾವಿನ ಹಣ್ಣು ಕೀಳಲು ಹೋಗಿ ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.
9ನೇ ತರಗತಿ ಓದುತ್ತಿದ್ದ ಬಾಲಕ ಸಾಯಿ ಭುವನ ಮೃತ ದುರ್ದೈವಿ.
ಹೊಸಕೋಟೆ ನಗರದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಬಳಿ ಇದ್ದ ಮರದಲ್ಲಿ ಹಣ್ಣು ಕೀಳಲು ಹೋಗಿ ದುರ್ಘಟನೆ ಸಂಭವಿಸಿದೆ.
ಇಂದು ಬೆಳಗ್ಗೆ ಹಾಸ್ಟೆಲ್ ಮಹಡಿ ಮೇಲೆ ಹಾಕಿದ್ದ ಬಟ್ಟೆ ತೆಗೆದುಕೊಂಡು ಬರಲು ಹೋಗಿದ್ದ ಇಬ್ಬರು ಸಹೋದರರು ಅಲ್ಲೇ ಇದ್ದ ಮರದಲ್ಲಿನ ಮಾವಿನ ಹಣ್ಣು ಕಂಡು ಕೀಳಲು ಮುಂದಾಗಿದ್ದರು. ಈ ವೇಳೆ ಓರ್ವ ಬಾಲಕನಿಗೆ ಕರೆಂಟ್ ಶಾಕ್ ಹೊಡೆದಿದ್ದು ಬಾಲಕ ಮಹಡಿ ಮೇಲಿಂದ ಕೆಳಕ್ಕೆ ಬಿದ್ದಿದ್ದಾನೆ.
ಕೂಡಲೆ ವಿದ್ಯಾರ್ಥಿಯನ್ನ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಅಣ್ಣ ತಮ್ಮ ಇಬ್ಬರೂ ಕಳೆದ ಎರಡು ವರ್ಷಗಳಿಂದ ವಸತಿ ಶಾಲೆಯಲ್ಲಿ ಓದುತ್ತಿದ್ದರು.
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

