ಬೆಂಗಳೂರು : ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ ನಡುವಿನ ನೇರಳೆ ಮಾರ್ಗದಲ್ಲಿ ನಾಳೆ (ಭಾನುವಾರ, ಜೂನ್ 6) ಮೆಟ್ರೋ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯವಾಗಲಿದೆ.
ಪೂರ್ವನಿರ್ಧಾರಿತ ಕಾರ್ಯನಿರ್ವಹಣೆಯ ನಿಮಿತ್ತ ಮೆಟ್ರೋ ಸೇವೆಯಯಲ್ಲಿ ಕೊಂಚ ವ್ಯತ್ಯಯವಾಗಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆ ಹೊರಡಿಸಿದೆ. ಜುಲೈ 06, 2025 ರಂದು ಭಾನುವಾರ ಬೆಳಿಗ್ಗೆ 7:00 ರಿಂದ 8:00ರ ಒಂದು ಗಂಟೆಯ ಅವಧಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ನಡುವಿನ ನೇರಳೆ ಮಾರ್ಗದಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲಿದೆ.
ಈ ಕಾಮಗಾರಿಗಳನ್ನು ನಿರ್ವಹಿಸಲು, ಇಂದಿರಾನಗರ ಮತ್ತು ಬೈಯಪ್ಪನಹಳ್ಳಿ, ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಈ ಮಾರ್ಗದಲ್ಲಿ ಬೆಳಿಗ್ಗೆ 08:00 ರಿಂದ ಸಾಮಾನ್ಯ ಸೇವೆಗಳನ್ನು ಪುನರಾರಂಭಿಸುತ್ತದೆ.
ನಗರದ ಬೇರೆಲ್ಲಾ ಮಾರ್ಗಗಳಲ್ಲಿ ಮೆಟ್ರೋ ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲಿದ್ದು, ಚಲ್ಲಘಟ್ಟದಿಂದ ಇಂದಿರಾನಗರ, ಬೈಯಪ್ಪನಹಳ್ಳಿಯಿಂದ ವೈಟ್ ಫೀಲ್ಡ್ ಮತ್ತು ಮಾದಾವರದಿಂದ ರೇಷ್ಮೆ ಸಂಸ್ಥೆ ವರೆಗಿನ ಸೇವೆಗಳು ಬೆಳಿಗ್ಗೆ 07:00 ಗಂಟೆಯಿಂದ ನಿಗದಿತ ವೇಳಾಪಟ್ಟಿಯಂತೆಯೇ ಕಾರ್ಯನಿರ್ವಹಿಸಲಿದೆ.
ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸುವಂತೆ ವಿನಂತಿಸಲಾಗಿದೆ. ಇದರಿಂದ ಉಂಟಾಗುವ ಅನಾನುಕೂಲತೆಗೆ ಬಿಎಂಆರ್ಸಿಎಲ್ ವಿಷಾದಿಸುತ್ತದೆ ಮತ್ತು ಸಾರ್ವಜನಿಕ ಸಹಕಾರವನ್ನು ಕೋರುತ್ತದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ.

