ಪ್ಯಾರಿಸ್: ಪೊಲೀಸರ ಗುಂಡಿನಿಂದ ಯುವಕನೊಬ್ಬ ಸಾವು ಕಂಡ ಬಳಿಕ ಫ್ರಾನ್ಸ್ನಲ್ಲಿ ಗಲಭೆ, ದೊಂಬಿಯಂತಹ ಪ್ರಕರಣಗಳು ಸತತವಾಗಿ ಹೆಚ್ಚುತ್ತಿವೆ. ಉದ್ರಿಕ್ತ ಪ್ರತಿಭಟನಕಾರರು ಪ್ಯಾರಿಸ್ನ ದಕ್ಷಿಣ ಉಪನಗರದ ಮೇಯರ್ ವಿನ್ಸೆಂಟ್ ಜೀನ್ಬ್ರುನ್ ಅವರ ನಿವಾಸಕ್ಕೆ ಕಾರು ನುಗ್ಗಿಸಿ ಬೆಂಕಿ ಇಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಪೊಲೀಸರ ಗುಂಡೇಟಿನಿಂದ ಸಾವು ಕಂಡ ಬಾಲಕನ ಅಜ್ಜಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, 17 ವರ್ಷದ ನಹೆಲ್ನ ಅಜ್ಜಿ ನಾಡಿಯಾ ಎಂಬುವವರು ಫ್ರೆಂಚ್ ಸುದ್ದಿ ಪ್ರಸಾರ ಸಂಸ್ಥೆಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ, “ಕಿಟಕಿ, ಬಸ್ಸುಗಳು, ಶಾಲೆಗಳನ್ನು ಒಡೆಯಬೇಡಿ. ನಾವು ವಿಷಯಗಳನ್ನು ಶಾಂತಗೊಳಿಸಲು ಬಯಸುತ್ತೇವೆ. ದಯಮಾಡಿ ಸಂಘರ್ಷ ನಿಲ್ಲಿಸಿ ಎಂದು ಗಲಭೆಕೋರರಿಗೆ ಮನವಿ ಮಾಡಿದ್ದಾರೆ.
ತನ್ನ ಮೊಮ್ಮಗನನ್ನು ಕೊಂದ ಅಧಿಕಾರಿಯ ಮೇಲೆ ಅಜ್ಜಿ ನಾಡಿಯಾ ಅವರಿಗೆ ಕೋಪವಿದೆಯಾದರೂ, ತನ್ನ ಮೊಮ್ಮಗನ ಸಾವು ದೇಶದ ಭದ್ರತೆ ಮೇಲೆ ಪರಿಣಾಮ ಬೀರಬಾರದು. ಫ್ರಾನ್ಸ್ ಇತ್ತೀಚಿನ ವರ್ಷಗಳಲ್ಲಿ ತನ್ನ ಕೆಟ್ಟ ಸಾಮಾಜಿಕ ಕ್ರಾಂತಿಯನ್ನು ಎದುರಿಸುತ್ತಿದ್ದು, ದೇಶದ ನ್ಯಾಯ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೆ. ನಮಗೆ ನ್ಯಾಯ ದೊರೆಯುತ್ತದೆ ಎಂದು ಹೇಳಿದ್ದಾರೆ.