ನವದೆಹಲಿ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಡೆಸುತ್ತಿರುವ ಆಪರೇಷನ್ ಗಂಗಾ ಇನ್ನೂ ಮುಂದುವರೆದಿದೆ. ಮೂರು ದಿನಗಳ ಹಿಂದೆ ಸಿಕ್ಕಿರುವ ಮಾಹಿತಿ ಅನ್ವಯ ಉಕ್ರೇನ್ನಲ್ಲಿ 50 ಭಾರತೀಯರು ಸಿಲುಕಿದ್ದಾರೆ,ಇವರಲ್ಲಿ 15 ರಿಂದ 20 ಜನರು ದೇಶಕ್ಕೆ ವಾಪಸ್ ಆಗಲು ಬಯಸಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಮಾತನಾಡಿದ್ದು, “ಯುದ್ಧ ಮುಂದುವರೆಯುತ್ತಲೇ ಇದೆ.ಆದರೆ ಅಲ್ಲಿಂದ ಮರಳುವವರನ್ನು ನಾವು ವಾಪಸ್ ಕರೆತರುತ್ತೇವೆ. ಅದಕ್ಕಾಗಿ ಪ್ರಯತ್ನಗಳನ್ನು ನಡೆಸಲಾಗುತ್ತಿದೆ” ಎಂದರು.
“15 ರಿಂದ 20 ಭಾರತೀಯರು ವಾಪಸ್ ಬರಲು ಬಯಸಿದ್ದಾರೆ. ಯುದ್ಧ ನಡೆಯುತ್ತಿದ್ದರೂ ನಾವು ಅವರು ವಾಪಸ್ ಆಗಲು ಬೇಕಾದ ಸಹಕಾರವನ್ನು ನೀಡುತ್ತೇವೆ. ವಾಪಸ್ ಬರಲು ಬಯಸಿರುವ ಎಲ್ಲಾ ಭಾರತೀಯರನ್ನು ನಾವು ಸಂಪರ್ಕಿಸಿದ್ದೇವೆ” ಎಂದು ಅರಿಂದಮ್ ಬಗ್ಚಿ ಹೇಳಿದರು.
ಉಳಿದವರು ಈಗಲೇ ಮರಳುವುದಿಲ್ಲ. ವಾಪಸ್ ಬರಲು ಬಯಸಿದವರನ್ನು ಕರೆತರಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.