ಉಕ್ರೇನ್ ರಾಜಧಾನಿ ಕೀವ್ನತ್ತ ರಷ್ಯನ್ ಸೇನೆ ಮುನ್ನುಗ್ಗುತ್ತಿದೆ. ತೀವ್ರ ಪ್ರತಿರೋಧ ನೀಡುತ್ತಿರುವ ಉಕ್ರೇನ್, ತನ್ನ ಹೋರಾಟವನ್ನು ಮುಂದುವರೆಸಿದೆ. ಭಾರತವು ತನ್ನ ನಿವಾಸಿಗಳನ್ನು ಕರೆತರಲು ‘ಆಪರೇಷನ್ ಗಂಗಾ’ ಯೋಜನೆಯನ್ನು ಘೋಷಿಸಿದೆ.
ಗುರುವಾರದಂದು ಉಕ್ರೇನ್ ಮೇಲೆ ರಷ್ಯಾ ಘೋಷಿಸಿದ್ದ ಕದನ ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೆ ಎರಡೂ ಪಕ್ಷಗಳಲ್ಲಿ ಅಪಾರ ಪ್ರಮಾಣದ ಸಾವು- ನೋವು ಸಂಭವಿಸಿದೆ. ಪ್ರಸ್ತುತ ರಷ್ಯನ್ ಸೇನೆ ಉಕ್ರೇನ್ ರಾಜಧಾನಿ ಕೀವ್ಅನ್ನು ಸುತ್ತುವರೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಉಕ್ರೇನ್ ತೀವ್ರ ಪ್ರತಿರೋಧ ಒಡ್ಡುತ್ತಿದೆ. ‘ದೇಶವನ್ನು ಸ್ವಾತಂತ್ರ್ಯಗೊಳಿಸಲು ಎಲ್ಲಿಯವರೆಗೆ ಅವಶ್ಯಕತೆಯಿದೆಯೋ ಅಲ್ಲಿಯವರೆಗೆ ಹೋರಾಡುತ್ತೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯ ತ್ವರಿತ ಗತಿಯಲ್ಲಿ ಮುಂದುವರೆದಿದೆ. ಇಂದು (ಫೆ.27) ಮುಂಜಾನೆ 250 ವಿದ್ಯಾರ್ಥಿಗಳನ್ನು ಹೊತ್ತ ಎರಡನೇ ವಿಮಾನ ರೊಮೇನಿಯಾದ ಬುಕಾರೆಸ್ಟ್ನಿಂದ ದೆಹಲಿಗೆ ಆಗಮಿಸಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 219 ಜನರನ್ನು ಹೊತ್ತಿದ್ದ ಮೊದಲ ವಿಮಾನವು ಶನಿವಾರ ಆಗಮಿಸಿತ್ತು. ಪ್ರಸ್ತುತ ಹಂಗೇರಿಯ ಬುಡಾಪೆಸ್ಟ್ನಿಂದ 240 ಜನರನ್ನು ಹೊತ್ತಿರುವ ಮೂರನೇ ವಿಮಾನ ಭಾರತದತ್ತ ಹೊರಟಿದೆ. ಉಕ್ರೇನ್ನಿಂದ ಭಾರತದ ನಾಗರಿಕರನ್ನು ಸ್ಥಳಾಂತರಿಸುವ ಯೋಜನೆಗೆ ‘ಆಪರೇಷನ್ ಗಂಗಾ’ ಎಂದು ಹೆಸರಿಡಲಾಗಿದೆ.
ಭಾನುವಾರ ಬೆಳಿಗ್ಗೆ, ಕೀವ್ನ ದಕ್ಷಿಣಕ್ಕೆ ಬೃಹತ್ ಸ್ಫೋಟಗಳು ಸಂಭವಿಸಿವೆ. ಉಕ್ರೇನ್ ಸರ್ಕಾರವು ಅಂತಹ ಒಂದು ಸ್ಫೋಟವು ಜುಲಿಯಾನಿ ವಿಮಾನ ನಿಲ್ದಾಣದ ಬಳಿ ಮತ್ತು ಇನ್ನೊಂದು ತೈಲ ಡಿಪೋದಲ್ಲಿ ಸಂಭವಿಸಿದೆ ಎಂದು ಹೇಳಿದೆ. ದೇಶದ ಎರಡನೇ ಅತಿದೊಡ್ಡ ನಗರವಾಗಿರುವ ಖಾರ್ಕಿವ್ನಲ್ಲಿ ರಷ್ಯಾ ಪಡೆಗಳು ಗ್ಯಾಸ್ ಪೈಪ್ಲೈನ್ ಅನ್ನು ಸ್ಫೋಟಿಸಿದೆ ಎಂದು ಉಕ್ರೇನ್ ಸರ್ಕಾರ ಭಾನುವಾರ ಹೇಳಿದೆ. ಉಕ್ರೇನ್ನಲ್ಲಿ ಇದುವರೆಗೆ ಸುಮಾರು 200 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 150,000 ಕ್ಕೂ ಹೆಚ್ಚು ನಾಗರಿಕರು ಪೋಲೆಂಡ್, ಮೊಲ್ಡೊವಾ ಸೇರಿದಂತೆ ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ. ರಷ್ಯಾದ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳಿಗೆ ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಗಲ್ ಧನ್ಯವಾದ ಹೇಳಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿ ಇದೀಗ ಭಾರತಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ವಿಪತ್ತು ಎಂಜಿಎಂಟಿ ಪ್ರಾಧಿಕಾರದ ಆಯುಕ್ತರು, ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿರುವ ಮನೋಜ್ ರಾಜನ್, ”ಕರ್ನಾಟಕದ ವಿದ್ಯಾರ್ಥಿಗಳು 5 ಬ್ಯಾಚ್ಗಳ ಮತ್ತೊಂದು ಸೆಟ್ ಇಂದು ಆಗಮಿಸುತ್ತಿದೆ. ಹಾಗಾಗಿ ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಒಟ್ಟು 18 ಮಂದಿ ಕರ್ನಾಟಕದ ವಿದ್ಯಾರ್ಥಿಗಳಿದ್ದಾರೆ. ಸದ್ಯಕ್ಕೆ, ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕಕ್ಕೆ ಸೇರಿದ 386 ಜನರ ವಿವರಗಳು ನಮ್ಮ ಬಳಿಯಿದೆ” ಎಂದಿದ್ದಾರೆ.
ರಷ್ಯನ್ ಸೇನೆ ಇದೀಗ ಉಕ್ರೇನ್ನ ಎರಡನೇ ದೊಡ್ಡ ನಗರವಾಗಿರುವ ಖಾರ್ಕಿವ್ಅನ್ನು ಪ್ರವೇಶಿಸಿವೆ. ಈ ನಡುವೆ ಉಕ್ರೇನಿಯನ್ನರೊಂದಿಗೆ ಮಾತುಕತೆಗಾಗಿ ರಷ್ಯಾದ ನಿಯೋಗ ಬೆಲಾರಸ್ಗೆ ಆಗಮಿಸಿದೆ ಎಂದು ಕ್ರೆಮ್ಲಿನ್ (ರಷ್ಯಾ) ವಕ್ತಾರರು ಹೇಳಿದ್ದನ್ನು ರಾಯಿಟರ್ಸ್ ವರದಿ ಮಾಡಿದೆ. ಬೆಲಾರಸ್ನಲ್ಲಿ ಉಕ್ರೇನ್ ಜತೆಗೆ ಮಾತುಕತೆಗೆ ಸಿದ್ಧ ಎಂದು ರಷ್ಯಾದ ಕ್ರೆಮ್ಲಿನ್ ಘೋಷಿಸಿದೆ. ಮಾತುಕತೆಗೆ ಸಿದ್ಧ ಆದರೆ ಬೆಲಾರಸ್ನಲ್ಲಿ ಸಾಧ್ಯವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಕ್ರಿಯೆ ನೀಡಿದ್ದಾರೆ.
ಉಕ್ರೇನ್ ರೈಲ್ವೇಸ್ ಹೆಚ್ಚುವರಿಯಾಗಿ ತುರ್ತು ರೈಲುಗಳನ್ನು ಉಚಿತವಾಗಿ ಆಯೋಜಿಸುತ್ತಿದೆ. ಮೊದಲಿಗೆ ಕೀವ್ನಿಂದ ಹೊರಡಲಿದೆ. ವೇಳಾಪಟ್ಟಿಯನ್ನು ರೈಲು ನಿಲ್ದಾಣಗಳಲ್ಲಿ ಕಾಣಬಹುದು. ಭದ್ರತಾ ಪರಿಸ್ಥಿತಿ ಮತ್ತು ಪ್ರಸ್ತುತದ ನಿಯಮಗಳಿಗೆ ಒಳಪಟ್ಟು ಯುದ್ಧ ವಲಯಗಳಿಂದ ಪಶ್ಚಿಮ ಪ್ರದೇಶಕ್ಕೆ ತೆರಳಿ ಎಂದು ಭಾರತೀಯ ನಾಗರಿಕರಿಗೆ ಉಕ್ರೇನ್ನಲ್ಲಿನ ರಾಯಭಾರ ಕಚೇರಿ ತಿಳಿಸಿದೆ.
ಉಕ್ರೇನ್ ಮೇಲೆ ದಾಳಿಯ ಸಂಬಂಧ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಅಂತರರಾಷ್ಟ್ರೀಯ ಜೂಡೋ ಫೆಡರೇಶನ್ (ಐಜೆಎಫ್) ಗೌರವ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲಾಗಿದೆ ಎಂದು ಕ್ರೀಡಾ ಆಡಳಿತ ಮಂಡಳಿ ಪ್ರಕಟಿಸಿದೆ.