ಕೊಲ್ಕತ್ತಾ: ಇತ್ತೀಚೆಗೆ ರಾಜಕಾರಗಳಲ್ಲಿ ತುಚ್ಛ ಭಾಷೆಯಲ್ಲಿ ಬೈದುಕೊಳ್ಳುವ, ಪರಸ್ಪರ ನಿಂದಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇತ್ತೀಚೆಗೆ ಉಪರಾಷ್ಟ್ರಗಳನ್ನು ವ್ಯಂಗ್ಯವಾಗಿ ಮಿಮಿಕ್ರಿ ಮಾಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಉಪರಾಷ್ಟ್ರಪತಿಯನ್ನು ಅಣಕಿಸಲಾಗಿದೆ.
ರಾಜ್ಯಸಭೆ ಸ್ಪೀಕರ್, ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಮಿಮಿಕ್ರಿ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರೀಗ ಮತ್ತೆ ಉಪ ರಾಷ್ಟ್ರಪತಿಯವರನ್ನು ಅಣಕಿಸಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜಗದೀಪ್ ಧನ್ಕರ್ ಅವರನ್ನು ಮಿಮಿಕ್ರಿ ಮಾಡಿದ್ದಾರೆ. ಹಾಗೆಯೇ, “ನಾನು ಮಾಡಿರುವುದರಲ್ಲಿ ತಪ್ಪೇನಿದೆ? ಹಾಸ್ಯ ಮನೋಭಾವ ಇರದವರು ಮಾತ್ರ ನನ್ನ ವರ್ತನೆಯನ್ನು ಸ್ವೀಕರಿಸಲ್ಲ” ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇದು ಈಗ ಮತ್ತೆ ವಿವಾದಕ್ಕೆ ಕಾರಣವಾಗಿದೆ.
ಪಶ್ಚಿಮ ಬಂಗಾಳದ ಶ್ರೀರಾಮ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡರು. ಇದೇ ವೇಳೆ ಅವರು ಜಗದೀಪ್ ಧನ್ಕರ್ ಅವರಂತೆ ಅಣಕಿಸಿದರು. ಹಾಗೆಯೇ, “ನಾನು ಮಿಮಿಕ್ರಿ ಮಾಡುತ್ತೇನೆ. ಇದೊಂದು ಕಲೆಯ ಪ್ರಕಾರವಾಗಿದೆ. ಹಾಗೊಂದು ವೇಳೆ ಅವಶ್ಯಕತೆ ಬಿದ್ದರೆ ಇನ್ನೂ ಸಾವಿರ ಸಲ ಮಿಮಿಕ್ರಿ ಮಾಡುತ್ತೇನೆ. ನನ್ನ ಅಭಿಪ್ರಾಯವನ್ನು ಕಲೆಯ ಮೂಲಕ ವ್ಯಕ್ತಪಡಿಸುವುದು ನನಗಿರುವ ಸ್ವಾತಂತ್ರ್ಯವಾಗಿದೆ. ನನ್ನನ್ನು ಜೈಲಿಗೆ ಹಾಕಿದರೂ ಹಿಂದಡಿ ಇಡುವುದಿಲ್ಲ” ಎಂದು ಹೇಳಿದರು.
ನಾನು ಹಾಸ್ಯಕ್ಕಾಗಿ ಹಾಗೆ ಮಾಡಿದೆ. ಕಲೆಯನ್ನು ಅರ್ಥ ಮಾಡಿಕೊಳ್ಳದವರಿಗೆ ನಾನೇನು ಮಾಡಲು ಸಾಧ್ಯ? ಒಂದಷ್ಟು ಜನ ಹಾಸ್ಯವನ್ನು ಅರ್ಥ ಮಾಡಿಕೊಳ್ಳದಿದ್ದರೆ, ಸುಸಂಸ್ಕೃತ ಮನಸ್ಥಿತಿಯನ್ನು ಹೊಂದಿರದಿದ್ದರೆ, ತಮ್ಮನ್ನೇ ತಾವು ಗುರಿಯಾಗಿಸಿಕೊಂಡರೆ ನಾನೇನು ಮಾಡಲಿ? ಅಂತಹ ಮನಸ್ಥಿತಿಯವರ ಬಗ್ಗೆ ನಾನು ಅಸಹಾಯಕನಾಗಿದ್ದೇನೆ. ಅಷ್ಟಕ್ಕೂ ಅವರೇಕೆ ಹಗಲು-ರಾತ್ರಿ ಹಾಗೆ ಕಣ್ಣೀರಿಡುತ್ತಿದ್ದಾರೆ? ಯಾಕೆ ಅವರು ನರೇಂದ್ರ ಮೋದಿ ಅವರನ್ನು ಅಷ್ಟು ಓಲೈಸುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.