ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಮವಾರ 51 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಮುಖ್ಯಮಂತ್ರಿಗಳು ಗೋರಖ್ಪುರದ ಗೋರಖ್ನಾಥ್ ದೇವಸ್ಥಾನದಲ್ಲಿ ‘ಪೂಜೆ’ ಸಲ್ಲಿಸುವ ಮೂಲಕ ಸದ್ದಿಲ್ಲದೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಪ್ರಸ್ತುತ ಉತ್ತರ ಪ್ರದೇಶದ 22 ನೇ ಮುಖ್ಯಮಂತ್ರಿಯಾಗಿ ಎರಡನೇ ಅವಧಿಯಲ್ಲಿದ್ದಾರೆ. 1998 ರಲ್ಲಿ ಗೋರಖ್ಪುರ ಕ್ಷೇತ್ರ ಪ್ರತಿನಿಧಿಸಿದ್ದ ಅವರು ಮೊದಲು ಲೋಕಸಭೆಗೆ ಪ್ರವೇಶಿಸಿದ್ದರು. ಅಂದಿನಿಂದ ಐದು ಬಾರಿ ಮರು ಆಯ್ಕೆಯಾಗಿದ್ದಾರೆ.
ಜೂನ್ 5, 1972 ರಂದು ಉತ್ತರಾಖಂಡ್ನ ಪೌರಿ ಗರ್ವಾಲ್ ಜಿಲ್ಲೆಯ ಪಂಚೂರ್ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದ ಅವರು ಮಾರ್ಚ್ 2017 ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಮೊದಲು, ಯೋಗಿ ಆದಿತ್ಯನಾಥ್ ಅವರು 1998 ರಿಂದ 2017 ರವರೆಗೆ ಸತತ ಐದು ಅವಧಿಗೆ ಗೋರಖ್ಪುರದ ಸಂಸದರಾಗಿ ಸೇವೆ ಸಲ್ಲಿಸಿದರು.
ರಾಜಕೀಯ ವೃತ್ತಿಜೀವನದ ಜೊತೆಗೆ, ಅವರು ಗೋರಖ್ಪುರದಲ್ಲಿರುವ ಹಿಂದೂ ದೇವಾಲಯವಾದ ಗೋರಖನಾಥ ಮಠದಲ್ಲಿ ಪ್ರಧಾನ ಅರ್ಚಕ ಸ್ಥಾನವನ್ನು ಹೊಂದಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಎಳೆಯ ವಯಸ್ಸಿನಲ್ಲಿಯೇ ಬಿಜೆಪಿಯೊಂದಿಗೆ ನಂಟು ಹೊಂದಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. 1991 ರಲ್ಲಿ ಬಿಜೆಪಿ ಸೇರಿದರು ಮತ್ತು 1998 ರಲ್ಲಿ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು.
ಆದಿತ್ಯನಾಥ್ ಅವರು ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 21 ನೇ ವಯಸ್ಸಿನಲ್ಲಿ, ಅವರು ತಮ್ಮ ಕುಟುಂಬವನ್ನು ತ್ಯಜಿಸಿ ಗೋರಖನಾಥ ಮಠದ ಮಾಜಿ ಪ್ರಧಾನ ಅರ್ಚಕರಾದ ಮಹಂತ್ ಅವೈದ್ಯನಾಥ್ ಅವರ ಶಿಷ್ಯರಾದರು.