ಲಕ್ನೋ: ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಪ್ರವಾಸಿ ತಾಣಗಳಲ್ಲಿ ಜಲ ಸಾರಿಗೆ ಉತ್ತೇಜನಕ್ಕೆ ಮುಂದಾಗಿದೆ. ರಾಜ್ಯದಲ್ಲಿ ನದಿ, ಸರೋವರ ಸೌರಶಕ್ತಿ ಚಾಲಿತ ದೋಣಿ ನಿಯೋಜನೆಗೆ ಮುಂದಾಗಿದೆ.
ದೋಣಿಗಳನ್ನು ನಿರ್ವಹಿಸಲು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಉತ್ತರ ಪ್ರದೇಶ ಸರ್ಕಾರ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ (UPNEDA) ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಎ.ಕೆ.ಶರ್ಮಾ ಮಾತನಾಡಿ, “ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ವಿದ್ಯುತ್ ಮೂಲಗಳ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ” ಎಂದು ತಿಳಿಸಿದ್ದಾರೆ.
ಯುಪಿ ಸರ್ಕಾರವು ಅಯೋಧ್ಯೆ ಮತ್ತು ವಾರಣಾಸಿಯನ್ನು ಸೌರ ನಗರಗಳಾಗಿ ಅಭಿವೃದ್ಧಿಪಡಿಸುತ್ತಿದೆ. ಇದು ಪ್ರವಾಸಿಗರಿಗೆ ಮಾಲಿನ್ಯ ಮುಕ್ತ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಸೌರ ದೋಣಿಗಳು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತವೆ ಎಂದು ಆಶಿಸಲಾಗಿದೆ. ಈ ಕ್ರಮವು ಮೀನುಗಾರ ಸಮುದಾಯವು ತಮ್ಮ ದೋಣಿಗಳನ್ನು ಸೌರಶಕ್ತಿ ಚಾಲಿತಗೊಳಿಸಲು ಉತ್ತೇಜನ ನೀಡಲಿದೆ ಎನ್ನಲಾಗಿದೆ.
ಪೈಲಟ್ ಯೋಜನೆಯಾಗಿ ಮೂರು ಸೌರಶಕ್ತಿ ಚಾಲಿತ ದೋಣಿಗಳನ್ನು ನಿರ್ವಹಿಸಲಾಗುವುದು. ವಾರಣಾಸಿಯಲ್ಲಿ ಒಂದು ಮತ್ತು ಅಯೋಧ್ಯೆಯಲ್ಲಿ ಎರಡು ಸೋಲಾರ್ ದೋಣಿಗಳನ್ನು ಹಾಕಲಾಗುವುದು. ಒಂದು ಬೋಟ್ಗೆ 1.05 ಕೋಟಿ ರೂ. ವೆಚ್ಚವಾಗಲಿದ್ದು, ಇಂತಹ 17 ಬೋಟ್ಗಳನ್ನು ಪರಿಚಯಿಸಲಾಗುವುದು ಎಂದರು.