ಅಯೋಧ್ಯೆ (ಉತ್ತರಪ್ರದೇಶ) : ನಕಲಿ ಅಂಕಪಟ್ಟಿ ನೀಡಿ ಶಾಸಕ ಹುದ್ದೆಯನ್ನು ಅಲಂಕರಿಸಿದ್ದ ಬಿಜೆಪಿಯ ಇಂದ್ರ ಪ್ರತಾಪ್ ಅಲಿಯಾಸ್ ಖುಬ್ಬು ತಿವಾರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. 28 ವರ್ಷಗಳ ಬಳಿಕ ಈ ಕೇಸ್ನ ತೀರ್ಪು ಇಂದು ಪ್ರಕಟಗೊಂಡಿದೆ.
ಉತ್ತರಪ್ರದೇಶದ ಅಯೋಧ್ಯೆಯ ಗೋಸಾಯಿಗಂಜ್ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಇವರ ವಿರುದ್ಧ 1992ರಲ್ಲಿ ದೂರು ದಾಖಲಾಗಿತ್ತು. ಕಾಲೇಜು ಪ್ರವೇಶ ಪಡೆದುಕೊಳ್ಳಲು ಇಂದ್ರ ಪ್ರತಾಪ್ ನಕಲಿ ಅಂಕಪಟ್ಟಿ ಬಳಕೆ ಮಾಡಿದ್ದರು ಎಂದು ಆಗ ಅಯೋಧ್ಯೆಯ ಸಾಕೇತ್ ಪದವಿ ಕಾಲೇಜ್ನ ಪ್ರಾಂಶುಪಾಲರು ಕೇಸ್ ದಾಖಲು ಮಾಡಿದ್ದರು.
ಅದರ ವಿಚಾರಣೆ 28 ವರ್ಷ ನಡೆದು, ಇದೀಗ ತೀರ್ಪು ಹೊರಬಂದಿದೆ. ಅಂದು ನಕಲಿ ಅಂಕ ಪಟ್ಟಿ ನೀಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ, ಕ್ರಿಮಿನಲ್ ಕೇಸ್ ಆಗಿರುವ ಕಾರಣ ಶಾಸಕ ಸ್ಥಾನದಿಂದ ಅವರನ್ನು ಅನರ್ಹಗೊಳಿಸಲಾಗಿದೆ.
ಐದು ವರ್ಷಗಳ ಶಿಕ್ಷೆಯ ಜತೆಗೆ ಎಂಟು ಸಾವಿರ ರೂಪಾಯಿ ದಂಡ ವಿಧಿಸಿದೆ. ಇದರ ವಿಚಾರಣೆಯನ್ನು ವಿಶೇಷ ಕೋರ್ಟ್ನ ನ್ಯಾಯಾಧೀಶರಾದ ಪೂಜಾ ಸಿಂಗ್ ನಡೆಸಿದ್ದರು.