ಲಕ್ನೋ: ಚಿನ್ನವನ್ನು ದೋಣಿಯ ರೂಪದಲ್ಲಿ ಸಾಗಿಸುತಿದ್ದ ಐವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಸುಮಾರು ಒಂದೂವರೆ ಕೆಜಿ ತೂಕದ ಚಿನ್ನದ ದೋಣಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಿಲಕ್ ಸಿಂಗ್, ಸೂರಜ್ ವರ್ಮಾ, ಧೀರೇಂದ್ರ ಪಾಲ್, ವಿಮಲೇಶ್ ಕುಮಾರ್ ಮತ್ತು ರಾಮಧನ್ ಬಂಧಿತರು. ಪ್ರಯಾಗ್ರಾಜ್ ಪೊಲೀಸರಿಗೆ ಕೆಲವರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಚಿನ್ನ ಸಹಿತ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಪ್ರಯಾಗ್ರಾಜ್ ಮತ್ತು ಕೌಶಾಂಬಿ ನಿವಾಸಿಗಳು ಎಂದು ವರದಿಯಾಗಿದೆ.
ಬಂಧಿತರು ಚಿನ್ನವನ್ನು ಅಸ್ಸಾಂನಿಂದ ತಂದಿದ್ದರು ಎಂದು ತನಿಖೆ ವೇಳೆ ಹೇಳಿದ್ದಾರೆ. ಮೊದಲಿಗೆ ತಾವೇ ಹಣ ನೀಡಿ ಖರೀದಿಸಿದ್ದು ಎಂದು ಹೇಳಿದ್ದರು. ಆದ್ರೆ ಪೊಲೀಸರು ದಾಖಲೆ ಕೇಳಿದಾಗ ಉತ್ತರ ನೀಡಿಲ್ಲ. ಅಸ್ಸಾಂನಿಂದ ತಂದ ಚಿನ್ನವನ್ನು ಉತ್ತರ ಪ್ರದೇಶದಲ್ಲಿ ಮಾರಲು ಮುಂದಾಗಿದ್ದರು. ಅನುಮಾನ ಬರದಿರಲಿ ಎಂದು ಚಿನ್ನವನ್ನು ದೋಣಿಯ ರೂಪದಲ್ಲಿ ಮಾಡಿಸಿಕೊಂಡಿದ್ದರು.