ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಕೊಡನಾಡು ಎಸ್ಟೇಟ್ ಬಂಗಲೆಯಲ್ಲಿ 2017ರಲ್ಲಿ ನಡೆದ ನಿಗೂಢ ಕೊಲೆಗಳು ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವಿಕೆ ಶಶಿಕಲಾ ಅವರನ್ನು ತಮಿಳುನಾಡು ಪೊಲೀಸರ ವಿಶೇಷ ತಂಡ ಗುರುವಾರ ವಿಚಾರಣೆಗೆ ಒಳಪಡಿಸಿದೆ.
ಚೆನ್ನೈ ನಗರದ ಟಿ ನಗರದಲ್ಲಿರುವ ಶಶಿಕಲಾಮನೆಯಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೊಡನಾಡು ಎಸ್ಟೇಟ್ ಬಂಗಲೆಯಲ್ಲಿ 2017ರಲ್ಲಿ ಭದ್ರತಾ ಕಾವಲುಗಾರನನ್ನು ಹತ್ಯೆ ಮಾಡಲಾಗಿತ್ತು. ಈ ಭವ್ಯ ಬಂಗಲೆಯ ಬಾಗಿಲನ್ನು ಒಡೆದು ಒಳಗೆ ನುಗ್ಗಲಾಗಿತ್ತು. ದುಬಾರಿ ವಾಚ್ ಮತ್ತು ಹರಳಿನ ರೈನೋಸೆರಸ್ ಸೇರಿದಂತೆ ಅನೇಕ ವಸ್ತುಗಳನ್ನು ಕಳವು ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದರು. ಈ ಸಂದರ್ಭದಲ್ಲಿ ಶಶಿಕಲಾ ಅವರು ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದರು.
ಈ ದರೋಡೆ ಮತ್ತು ಕೊಲೆಯ ಬಳಿಕ ನಡೆದ ನಂತರದ ಘಟನೆಗಳು ಇಡೀ ಪ್ರಕರಣವನ್ನು ಜಟಿಲಗೊಳಿಸಿದೆ. ಜಯಲಲಿತಾ ಅವರ ಮಾಜಿ ಕಾರು ಚಾಲಕನಾಗಿದ್ದ ಪ್ರಮುಖ ಆರೋಪಿ ಕನಗರಾಜ್, ಮಾಜಿ ಸಿಎಂ ಇ ಇಳನಿಸ್ವಾಮಿ ಅವರ ತವರೂರು ಎಡಪ್ಪಾಡಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ. ಅದೇ ದಿನ ಎರಡನೇ ಆರೋಪಿ ಸಯಾನ್ ಕೂಡ ಅಪಘಾತಕ್ಕೆ ಒಳಗಾಗಿದ್ದ. ಅಪಘಾತದಲ್ಲಿ ಸಯಾನ್ ಬದುಕುಳಿದರೂ, ಆತನ ಹೆಂಡತಿ ಮತ್ತು ಮಗಳು ಮೃತಪಟ್ಟಿದ್ದರು. ಇದರ ಬಳಿಕ ಎಸ್ಟೇಟ್ನಲ್ಲಿದ್ದ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿದ್ದನು.
ಜಯಲಲಿತಾ ನಿಧನದ ಬಳಿಕ ರಾಜಕೀಯ ವಲಯದ ಕೆಲವರಿಗೆ ಈ ಘಟನೆಯ ನಂಟು ಬೆಸೆಯಲಾಗಿತ್ತು. ಕಳೆದ ವರ್ಷ ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ, ಹೊಸ ಮಾಹಿತಿಗಳ ಆಧಾರದಲ್ಲಿ ಮತಷ್ಟು ವಿಚಾರಣೆ ನಡೆಸಬೇಕು ಎಂದು ತಮಿಳುನಾಡು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಮರು ತನಿಖೆಯು ತಮ್ಮನ್ನು ಸಿಲುಕಿಸುವ ಪ್ರಯತ್ನ ಎಂದು ಇಪಿಎಸ್ ಆರೋಪಿಸಿದ್ದರು.