ನವದೆಹಲಿ: ಚಂದ್ರನ ಮೇಲೆ ಯಶಸ್ವಿ ಕಾರ್ಯಾಚರಣೆಯ ನಂತರ, ಭಾರತೀಯ ವಿಜ್ಞಾನಿಗಳು ಈಗ ಸಮುದ್ರಯಾನ ಯೋಜನೆಯ ಭಾಗವಾಗಿ ಕೋಬಾಲ್ಟ್, ನಿಕ್ಕಲ್ ಮತ್ತು ಮ್ಯಾಂಗನೀಸ್ನಂತಹ ಅಮೂಲ್ಯ ಲೋಹಗಳು ಮತ್ತು ಖನಿಜಗಳನ್ನು ಹುಡುಕಲು ದೇಶೀಯವಾಗಿ ನಿರ್ಮಿಸಲಾದ ಜಲಾಂತರ್ಗಾಮಿ ನೌಕೆಯಲ್ಲಿ 6,000 ಮೀಟರ್ ಆಳಕ್ಕೆ ಮೂವರನ್ನು ಕಳುಹಿಸಲು ತಯಾರಿ ನಡೆಸುತ್ತಿದ್ದಾರೆ.
ಸುಮಾರು ಎರಡು ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಮತ್ಸ್ಯ 6000 ಎಂಬ ಜಲಾಂತರ್ಗಾಮಿ ನೌಕೆ 2024 ರ ಆರಂಭದಲ್ಲಿ ಚೆನ್ನೈ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ತನ್ನ ಮೊದಲ ಸಮುದ್ರ ಪ್ರಯೋಗಗಳನ್ನು ನಡೆಸಲಿದೆ. ಚೆನ್ನೈ ಸಮೀಪದ ಸಾಗರ ತೀರದಲ್ಲಿ ಬಂಗಾಳ ಕೊಲ್ಲಿಯಲ್ಲಿ ಈ ಜಲಾಂತರ್ಗಾಮಿ ನೌಕೆಯ ಮೊದಲ ಸಮುದ್ರ ಪರೀಕ್ಷೆ ನಡೆಯಲಿದ್ದು, 2024ರ ಆರಂಭದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.
2023ರ ಜೂನ್ನಲ್ಲಿ ಅಮೆರಿಕ ಮೂಲದ ಓಷನ್ ಗೇಟ್ ಸಂಸ್ಥೆಯ ಟೈಟಾನ್ ಜಲಾಂತರ್ಗಾಮಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಸಮುದ್ರದ ಆಳದಲ್ಲೇ ಸ್ಫೋಟಗೊಂಡಿತ್ತು. ಈ ನೌಕೆಯಲ್ಲಿದ್ದ ಪ್ರವಾಸಿಗರು ದುರ್ಮರಣ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಮತ್ಸ್ಯ ಜಲಾಂತರ್ಗಾಮಿ ನೌಕೆಯ ಸುರಕ್ಷತೆ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ.