ಜೈಪುರ: ಪಂಚರಾಜ್ಯ ಚುನಾವಣೆಗಳ ಪೈಕಿ ರಾಜಸ್ಥಾನದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ರಾಜಸ್ಥಾನ ಸಿಎಂ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಮುಂದುವರೆದಿದ್ದು, ಮಾಜಿ ಸಿಎಂ ವಸುಂಧರಾ ರಾಜೆ ದಿಢೀರ್ ದೆಹಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಗುರುವಾರದಂದು ರಾಜೆ ಬಿಜೆಪಿ ಹೈಕಮಾಂಡ್ ನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹೊಸದಾಗಿ ಚುನಾಯಿತರಾದ ಸುಮಾರು 60 ಬಿಜೆಪಿ ಶಾಸಕರು ಸಿವಿಲ್ ಲೈನ್ಸ್ ನಲ್ಲಿರುವ ನಿವಾಸದಲ್ಲಿ ವಸುಂಧರಾ ರಾಜೆ ಅವರನ್ನು ಭೇಟಿಯಾದ ನಂತರ ಈ ಬೆಳವಣಿಗೆ ನಡೆದಿದೆ.
ಮುಖ್ಯಮಂತ್ರಿಯ ಹೆಸರನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ ಮತ್ತು ಅದಕ್ಕೂ ಮೊದಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ, ಶಾಸಕಾಂಗ ಪಕ್ಷದ ಸಭೆ ಕುರಿತು ಪಕ್ಷ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. 2003 ರಿಂದ 2008 ಹಾಗೂ 2013-18 ಅವಧಿಯಲ್ಲಿ ವಸುಂಧರಾ ರಾಜೆ 2 ಅವಧಿಗೆ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.
2018 ರಲ್ಲಿ ಬಿಜೆಪಿಯ ಸೋಲಿನ ನಂತರ ಮತ್ತು ಪಕ್ಷದೊಳಗಿನ ಬದಲಾದ ಬೆಳವಣಿಗೆಗಳ ನಂತರ, ರಾಜೆ ಅವರನ್ನು ಬದಿಗಿರಿಸಲಾಗಿತ್ತು. ಇದೀಗ ರಾಜ್ಯದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದ್ದು, ಮೂರನೇ ಬಾರಿಗೆ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಸಿಗಬಹುದೆಂಬ ನಿರೀಕ್ಷೆ ಅವರ ಬೆಂಬಲಿಗರಲ್ಲಿದೆ.