ನವದೆಹಲಿ: ದೆಹಲಿಯ ಎರಡು ಪ್ರತಿಷ್ಠಿತ ಹೋಟೆಲ್ಗಳ ನಡುವೆ ‘ಬಟರ್ ಚಿಕನ್’ ಮೂಲ ಕುರಿತು ಶುರುವಾಗಿರುವ ಜಟಾಪಟಿ ಈಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.
‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ‘ಬಟರ್ ಚಿಕನ್’ ಮೂಲದ ವಿಚಾರವಾಗಿ ಮಾನಹಾನಿಕರ ಹೇಳಿಕೆ ಪ್ರಕಟಿಸಲಾಗಿದೆ ಎಂಬ ಆರೋಪಿಸಿ, ಮೋತಿ ಮಹಲ್ ಹೋಟೆಲ್ಗಳ ಮಾಲೀಕರ ವಿರುದ್ಧ ‘ದರಿಯಾಗಂಜ್’ ರೆಸ್ಟೋರೆಂಟ್ ಹೈಕೋರ್ಟ್ನಲ್ಲಿ ದಾವೆ ಹೂಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ನರೂಲಾ ಅವರು, ‘ಪ್ರಕಟಿತ ಲೇಖನಗಳಲ್ಲಿನ ಹೇಳಿಕೆಗಳಿಂದ ತಾವು ಅಂತರಕಾಯ್ದುಕೊಳ್ಳುತ್ತಿರುವುದನ್ನು ದೃಢಪಡಿಸುವ ಕುರಿತು ಪ್ರಮಾಣಪತ್ರ ಸಲ್ಲಿಸುವಂತೆ’ ಮೋತಿ ಮಹಲ್ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಯನ್ನು ಮೇ 29ಕ್ಕೆ ಮುಂದೂಡಿದ್ದಾರೆ.
ಇನ್ನು ‘ಬಟರ್ ಚಿಕನ್’ ಹಾಗೂ ‘ದಾಲ್ ಮಖನಿ’ ಖಾದ್ಯಗಳು ತಮ್ಮ ಪೂರ್ವಜ ಕುಂದನ್ ಲಾಲ್ ಗುಜ್ರಾಲ್ ಅವರ ಕಲ್ಪನೆ. ಅವರೇ ಮೊದಲಿಗೆ ತಯಾರಿಸಿದವರು ಎಂದು ಮೋತಿ ಮಹಲ್ ಹೋಟೆಲ್ ಮಾಲೀಕರ ವಾದವಾಗಿದೆ.
‘ಈ ಭಕ್ಷ್ಯಗಳ ಮೂಲ ಕುರಿತು ದರಿಯಾಗಂಜ್ ರೆಸ್ಟೋರೆಂಟ್ ಜನರ ದಾರಿ ತಪ್ಪಿಸುತ್ತಿದೆ’ ಎಂದು ದೂರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
‘ಈ ವಿಚಾರವಾಗಿ ಲೇಖನವೊಂದರಲ್ಲಿ ಪ್ರಕಟವಾಗಿದ್ದ ಅಭಿಪ್ರಾಯಗಳನ್ನು ಪತ್ರಿಕೆಯ ದೃಷ್ಟಿಕೋನದಿಂದ ನೋಡಬೇಕೇ ಹೊರತು, ಅದಕ್ಕಾಗಿ ನಮ್ಮ ವಿರುದ್ಧ ಆರೋಪ ಮಾಡಬಾರದು’ ಎಂಬ ವಾದವನ್ನು ಮಂಡಿಸಿದ್ದರು.
‘ಬಟರ್ ಚಿಕನ್’ & ‘ದಾಲ್ ಮಖನಿ’ ಭಕ್ಷ್ಯಗಳನ್ನು ತಮ್ಮ ಪೂರ್ವಜರಾದ ಕುಂದನ್ ಲಾಲ್ ಜಗ್ಗಿ ಮೊದಲಿಗೆ ತಯಾರಿಸಿದವರು ಎಂದು ದರಿಯಾಗಂಜ್ ರೆಸ್ಟೋರೆಂಟ್ ಮಾಲೀಕರು ಹೇಳಿಕೊಳ್ಳದಂತೆ ನಿರ್ಬಂಧ ಹೇರಬೇಕು’ ಎಂದೂ ಕೋರಿದ್ದರು.
ಇದಕ್ಕೆ ಪ್ರತಿಯಾಗಿ ಅರ್ಜಿ ಸಲ್ಲಿಸಿರುವ ದರಿಯಾಗಂಜ್ ರೆಸ್ಟೋರೆಂಟ್ ಮಾಲೀಕರು,’ವಾಲ್ ಸ್ಟ್ರೀಟ್ ಜರ್ನಲ್’ನಲ್ಲಿ ಪ್ರಕಟವಾಗಿರುವ ಹೇಳಿಕೆಗಳು ಮಾನಹಾನಿಕರವಾಗಿವೆ’ ಎಂದಿದೆ.
‘ಪತ್ರಿಕೆಯಲ್ಲಿ ಲೇಖನ ಪ್ರಕಟಗೊಂಡ ನಂತರ ನಮ್ಮ ರೆಸ್ಟೋರೆಂಟ್ ಖ್ಯಾತಿ ಮತ್ತು ವ್ಯವಹಾರದ ಮೇಲೆ ಪರಿಣಾಮ ಉಂಟಾಗಿದೆ. ಈ ವಿಷಯವನ್ನು ಶೀಘ್ರವೇ ಇತ್ಯರ್ಥಪಡಿಸಬೇಕು’ ಎಂದು ದರಿಯಾಗಂಜ್ ರೆಸ್ಟೋರೆಂಟ್ ಮಾಲೀಕರು ಕೋರಿದ್ದಾರೆ.