ಒಡಿಶಾ: ಒಡಿಶಾದ ಜಾಜ್ಪುರ ಜಿಲ್ಲೆಯಲ್ಲಿ ನ್ಯಾಷನಲ್ ಹೈವೇ 16 ಬಳಿಯ ಬಾರ್ಬತಿಯಲ್ಲಿ ಮೇಲ್ಸೇತುವೆಯಿಂದ ಬಸ್ ಪಲ್ಟಿಯಾಗಿ ಐವರು ಮೃತಪಟ್ಟು 38ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿದ ಬಸ್ ಬಾರಾಬತಿ ಚೌಕ್ ಬಳಿಯ ಮೇಲ್ಸೇತುವೆಯಿಂದ ಉರುಳಿ ದುರ್ಘಟನೆ ಸಂಭವಿಸಿದೆ.
ಬಸ್ನಲ್ಲಿ ಮಹಿಳೆಯರು, ಮಕ್ಕಳು ಸೇರಿ ಸುಮಾರು 55 ಪ್ರಯಾಣಿಕರಿದ್ದರು. ಈ ಬಸ್ ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ಹಾಲ್ದಿಯಾಗೆ ತೆರಳುತ್ತಿತ್ತು.
ಜಾಜ್ಪುರ ಜಿಲ್ಲಾ ಆರೋಗ್ಯಾಧಿಕಾರಿಗಳು ಘಟನೆ ಬಗ್ಗೆ ಮಾತನಾಡಿ.. ಬಸ್ನ ಡ್ರೈವರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು SCB ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯರು ಅಪಘಾತವನ್ನು ನೋಡಿದ್ದಾರೆ. ಡ್ರೈವರ್ ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸಿದ್ದಾನೆ ಎನ್ನುತ್ತಿದ್ದಾರೆ. ಈ ಬಗ್ಗೆಯೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದಿದ್ದಾರೆ.
ಮೃತರ ಕುಟುಂಬಕ್ಕೆ 3 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಣೆ ಮಾಡಿದ್ದಾರೆ.