ಒಡಿಶಾ: ಮದ್ಯದ ಅಮಲಿನಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಕೊಂದು ಬಾವಿಗೆ ಎಸೆದಿರುವ ಘಟನೆ ಒಡಿಶಾದ ಸುಂದರ್ಗಢ ಜಿಲ್ಲೆಯ ಕೊಯಿಡಾ ಪೊಲೀಸ್ ವ್ಯಾಪ್ತಿಯ ಕುಲಾ ಗ್ರಾಮದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಪಾಂಡು ಮುಂಡ ಎಂದು ಗುರುತಿಸಲಾದ ದೈನಂದಿನ ಕೂಲಿ ಕಾರ್ಮಿಕ, ಶನಿವಾರ ರಾತ್ರಿ ಮದ್ಯದ ಅಮಲಿನಲ್ಲಿ ಮನೆಗೆ ಮರಳಿದರು.
ಈ ವೇಳೆ ಕೆಲವು ಸಣ್ಣ ಕಾರಣಗಳಿಗಾಗಿ ತನ್ನ ಹೆಂಡತಿ ದುಬುಲಿ ಮುಂಡಾ ಅವರೊಂದಿಗೆ ಜಗಳವಾಡಿದರು. ಕೋಪದ ಭರದಲ್ಲಿ, ಪಾಂಡು ಮೊದಲು ಕೊಡಲಿಯಿಂದ ಅವಳ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದನು. ಇದರಿಂದ ಹೆದರಿದ ಪತ್ನಿ ಸ್ಥಳದಿಂದ ಓಡಿಹೋಗಿ ಮನೆಯ ಸಮೀಪದ ಪೊದೆಗಳಲ್ಲಿ ಅಡಗಿಕೊಂಡಳು. ಆದರೆ, ಈ ನಡುವೆ ಬಂದ 5 ವರ್ಷದ ಮಗಳು ಸೀಮಾ, 2 ವರ್ಷದ ಮಗ ರಾಜು, ಎರಡು ತಿಂಗಳ ಮಗು ಮೇಲೆ ಹಲ್ಲೆ ನಡೆಸಿ ಕೊಂದಿದ್ದಲ್ಲದೇ, ಅವರನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾನೆ.
ಭಾನುವಾರ ಬೆಳಗ್ಗೆ ದುಬುಲಿ ಹೊರ ಬಂದು ಮಕ್ಕಳನ್ನು ಹುಡುಕಿದ್ದಾಳೆ. ಈ ವೇಳೆ ಎಷ್ಟು ಹುಡುಕಿದರೂ ಮಕ್ಕಳು ಕಾಣಲಿಲ್ಲ. ಬಾವಿಯ ಬಳಿ ಬಿದ್ದಿದ್ದ ತನ್ನ ಮನೆಯ ಹೊದಿಕೆ ಕಂಡ ದುಬುಲಿ ಅಲ್ಲಿ ಹೋಗಿ ನೋಡಿದಾಗ, ಮಕ್ಕಳು ಬಾವಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾಳೆ.
ನಂತರ ಅಗ್ನಿಶಾಮಕ ದಳದ ಸಿಬ್ಬಂದಿಗಳ ನೆರವಿನಿಂದ ಮೂವರು ಮಕ್ಕಳ ಮೃತದೇಹಗಳನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.