ಕಣ್ಣೂರು: ಬಿಜೆಪಿ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿರುವ ಘಟನೆ ನಡೆದಿದೆ.
ಅವರು ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದರು, ಬಿಜೆಪಿಯು ವೈವಿಧ್ಯತೆಯತೆಯಿಂದ ಕೂಡಿರುವ ಭಾರತವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಲಕ್ಷಾಂತರ ಜನರಿಗೆ ಹಾನಿಯುಂಟು ಮಾಡುತ್ತಿದೆ ಎಂದು ರಾಹುಲ್ ಕಿಡಿಕಾರಿದರು.
ಸಂವಿಧಾನವು ಆಧುನಿಕ ಭಾರತದ ಅಡಿಪಾಯ. ಸಂವಿಧಾನ ಎಲ್ಲಾ ಜನರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಕಲ್ಪಿಸಿದೆ. ಸಂವಿಧಾನವು ವಿವಿಧ ಸಂಸ್ಥೆಗಳಿಂದ ರಕ್ಷಿಸಲ್ಪಟ್ಟಿದೆ. ಅಧಿಕಾರಶಾಹಿ ವರ್ಗ, ನ್ಯಾಯಾಂಗ, ಚುನಾವಣಾ ಆಯೋಗ, ಪೊಲೀಸ್, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಇತರ ಸಂಸ್ಥೆಗಳು ಸಂವಿಧಾನ ಮತ್ತು ಭಾರತೀಯ ನಾಗರಿಕರ ಹಕ್ಕುಗಳ ರಕ್ಷಕರಾಗಿರಬೇಕು ಎಂದು ರಾಹುಲ್ ತಿಳಿಸಿದ್ದಾರೆ.
ಕಾಂಗ್ರೆಸ್ ವಿವಿಧ ಭಾಷೆ, ಸಂಸ್ಕೃತಿ , ಸಾಂಪ್ರದಾಯವನ್ನು ಗೌರವಿಸುತ್ತದೆ, ಆದರೆ ಬಿಜೆಪಿ ಈ ಎಲ್ಲಾ ಅಂಶಗಳಿಗೆ ವಿರುದ್ಧವಾಗಿದೆ. ಆದರೆ ವೈವಿಧ್ಯಮಯ ಭಾರತವನ್ನು ಬದಲಾಯಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯವರ ಶ್ರಮವು ವ್ಯರ್ಥವಾಗಲಿದೆ. ಏಕೆಂದರೆ ವಿವಿಧತೆಯಲ್ಲಿ ಏಕತೆಯಿಂದ ಕೂಡಿರುವ ಭಾರತವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದರು.