ಪಾಲಕ್ಕಾಡ್ : ಶಿಕ್ಷಕರ ಗುಂಪೊಂದು 10 ನೇ ತರಗತಿ ವಿದ್ಯಾರ್ಥಿಗೆ ಶಾಲಾ ಆವರಣದಲ್ಲಿ ಹುಟ್ಟುಹಬ್ಬದ ಆಚರಣೆ ಮತ್ತು ಕಲ್ಲಂಗಡಿ ಹಣ್ಣನ್ನು ಕತ್ತರಿಸಿದ್ದಕ್ಕಾಗಿ ಥಳಿಸಿದೆ ಎಂದು ಆರೋಪಿಸಲಾಗಿದೆ.
ಕೇರಳದ ಪಾಲಕ್ಕಾಡ್ ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.ಗಾಯಗೊಂಡಿರುವ ವಿದ್ಯಾರ್ಥಿಯನ್ನು ಶ್ರೇಯಸ್ ಎಂದು ಗುರುತಿಸಲಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವರದಿಗಳ ಪ್ರಕಾರ, ಶ್ರೇಯಸ್ ಶಾಲೆಯಲ್ಲಿ ತನ್ನ ಸ್ನೇಹಿತನೊಬ್ಬನಿಗೆ ಹುಟ್ಟುಹಬ್ಬದ ಆಚರಣೆ ಆಯೋಜಿಸಿದ್ದ. ಕೇಕ್ ಬದಲು ಕಲ್ಲಂಗಡಿ ಹಣ್ಣನ್ನು ಕತ್ತರಿಸುವ ಯೋಜನೆ ಹಾಕಿಕೊಂಡಿದ್ದರು. ಈ ಹುಟ್ಟುಹಬ್ಬದ ಸಂಭ್ರಮಾಚರಣೆಯಿಂದ ಅಸಮಾಧಾನಗೊಂಡ ಶಿಕ್ಷಕರು, ಶ್ರೇಯಸ್ ಅವರನ್ನು ಸಿಬ್ಬಂದಿ ಕೊಠಡಿಗೆ ಕರೆದರು. ಆಗ ಶಿಕ್ಷಕರ ಗುಂಪೊಂದು ಆತನನ್ನು ಥಳಿಸಿದೆ ಎನ್ನಲಾಗಿದೆ.
ಆದರೆ, ಶಾಲೆಯ ಅಧಿಕಾರಿಗಳು ಆರೋಪವನ್ನು ತಳ್ಳಿ ಹಾಕಿದ್ದಾರೆ. ಶಾಲೆಯ ಘನತೆಗೆ ಮಸಿ ಬಳಿಯಲು ಹೊರಗಿನವರು ಮಾಡುತ್ತಿರುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ. ಶಿಕ್ಷಕರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.