ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಡಗಾಮ್ ಜಿಲ್ಲೆಯಲ್ಲಿ ಬಹುತೇಕ ಮಕ್ಕಳೇ ಒಳಗೊಂಡಂತೆ 39 ಜನರು ವಿಷಪೂರಿತ ಆಹಾರ ಸೇವಿಸಿ ಆಸ್ಪತ್ರೆ ಸೇರಿರುವ ಘಟನೆ ಶುಕ್ರವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲರಿಗೂ ಹೊಟ್ಟೆಗೆ ಸಂಬಂಧಿತ ತೊಂದರೆ ಎದುರಾಗಿತ್ತು.ಬಳಿಕ ಎಲ್ಲರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಬಡಗಾಮ್ನ ಚರಾರ್-ಎ-ಶರೀಫ್ ಪ್ರದೇಶದ ಜೈಗಿಪೋರಾ ಗ್ರಾಮದಲ್ಲಿ ಅರಿಶಿನವನ್ನು ಸೇರಿಸಿ ಬೇಯಿಸಿದ ಸಾಂಪ್ರದಾಯಿಕ ಅನ್ನವನ್ನು ಸೇವಿಸಿದ ಜನರು ಹೊಟ್ಟೆಯ ಸಮಸ್ಯೆಯಿಂದ ಬಳಲಿದ್ದಾರೆ.
‘ಈ ಅಸ್ವಸ್ಥರ ಪೈಕಿ 15 ಮಕ್ಕಳನ್ನು ಶ್ರೀನಗರದ ಜಿಬಿ ಪಂಥ್ ಆಸ್ಪತ್ರೆಗೆ, ಮೂವರನ್ನು ಎಸ್ಎಂಎಚ್ಎಸ್ ಆಸ್ಪತ್ರೆಗೆ (ಶ್ರೀನಗರ) ದಾಖಲಿಸಲಾಗಿದೆ. ಉಳಿದವರನ್ನು ಚರಾರ್-ಎ-ಶರೀಫ್ ಪಟ್ಟಣದ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ವೀಕ್ಷಣೆಯಲ್ಲಿ ಇರಿಸಲಾಗಿದೆ’ ಎಂದು ಬಡ್ಗಾಮ್ನ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ತಜಮುಲ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.
ಸಂತ್ರಸ್ತ ಗ್ರಾಮಕ್ಕೆ ಎದುರಾಗಬಹುದಾದ ಯಾವುದೇ ತುರ್ತು ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು