ಗೋವಾ: ಗೋವಾದ ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಫೆ.8ರಿಂದ 10ರವರೆಗೆ ಕರ್ನಾಟಕ, ಕೇರಳ, ಮಹಾರಾಷ್ಟ್ರ ರಾಜ್ಯಗಳ ಆಕಾಶವಾಣಿ ಮತ್ತು ದೂರದರ್ಶನ ಕೃಷಿ ಕಾರ್ಯಕ್ರಮ ಅಧಿಕಾರಿಗಳ ಕಾರ್ಯಾಗಾರವು ಜರುಗಿತು.
ಈ ಸಂದರ್ಭದಲ್ಲಿ ಮಡಿಕೇರಿ ಆಕಾಶವಾಣಿಯು ಪ್ರತೀ ದಿನ ಸಂಜೆ 6.50 ಕ್ಕೆ ಬಿತ್ತರಿಸುತ್ತಿರುವ ಕಿಸಾನ್ ವಾಣಿ ಕಾರ್ಯಕ್ರಮಗಳನ್ನು ಪರಿಚಯಿಸಿ,ಕೃಷಿಗೀತೆಗಳನ್ನು ಅಧರಿಸಿದ ಕೃಷಿ ಕಳಸ ಎಂಬುದನ್ನು ಕೇಳಿಸಲಾಯಿತು. ಇದು ದೆಹಲಿಯಿಂದ ಆಗಮಿಸಿದ್ದ ಆಕಾಶವಾಣಿಯ ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯದ ಹಿರಿಯ ಅಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿತು.
ಮಡಿಕೇರಿ ಆಕಾಶವಾಣಿಯಲ್ಲಿ ಕೃಷಿ ಕುರಿತು ತಯಾರಿಸಿರುವ 50 ಕೃಷಿ ಗೀತೆಗಳ ಬಗ್ಗೆಯೂ ಉಲ್ಲೇಖ ಮಾಡಲಾಯಿತು. ಅಧಿಕಾರಿಗಳು ನಮ್ಮೆಲ್ಲರ ಈ ಪ್ರಯತ್ನವು ಉಪಯುಕ್ತವಾದುದು, ಪರಿಣಾಮಕಾರಿಯಾದುದು ಎಂದು ಒಕ್ಕೊರಳಿಂದ ಹೇಳಿದರು.ಹಾಡುಗಳ ಮೂಲಕ ಕೃಷಿ ಮಾಹಿತಿ ತಿಳಿಸುವುದು ಸೂಕ್ತ ಹಾಗೂ ಉಪಯುಕ್ತ ಎಂದವರು ಹೇಳಿದರು. ಮಡಿಕೇರಿ ಆಕಾಶವಾಣಿಯಿಂದ ಮಾಡುತ್ತಿರುವ ಕೃಷಿ ರಸ ಪ್ರಶ್ನೆಗಳ ನೇರ ಪ್ರಸಾರದ ಕೃಷಿ ಸಿರಿ, ನೇರ ಫೋನ್ ಇನ್, ಇತ್ಯಾದಿ ಕಾರ್ಯಕ್ರಮಗಳ ಬಗ್ಗೆಯೂ ಅಧಿಕಾರಿಗಳಿಗೆ ತಿಳಿಸಲಾಯಿತು.
ಕೃಷಿ ಕಾರ್ಯಕ್ರಮಗಳ ಪ್ರಸಾರ ಮುನ್ನ ಮೂಡಿಬರುವ ಕೋಟಿ ವಿದ್ಯೆಗಳಲ್ಲಿ ಕೃಷಿ ವಿದ್ಯೆಯೇ ಮೇಲು, ಕೃಷಿತೋ ನಾಸ್ತಿ ದುರ್ಭಿಕ್ಷ ಎಂಬ ವಾಕ್ಯಗಳೊಂದಿಗೆ ಕಾಣಿಸುವ ಸಂಗೀತವೂ ಅಧಿಕಾರಿಗಳಿಗೆ ಇಷ್ಟವಾಯಿತು