ದೆಹಲಿ: 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 9ನೇ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಹೊಸ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನವಭಾರತದ ಸಾಕಾರಕ್ಕಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೆ ಈ ದೇಶ ನಮನ ಸಲ್ಲಿಸುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಾತುಗಳು
- ಮುಂದಿನ 25 ವರ್ಷಗಳಲ್ಲಿ ಭಾರತ ಬಲಶಾಲಿ ದೇಶವಾಗಿ ಹೊರಹೊಮ್ಮಬೇಕು.
- ಹೊಸಹಾದಿಯಲ್ಲಿ ನಡೆಯುವುದಕ್ಕೆ ಮುಂದಿನ 5 ವರ್ಷಗಳಿಗಾಗಿ ನಾವು ‘ಪಂಚಪ್ರಾಣ’ವನ್ನು ಅಳವಡಿಸಿಕೊಳ್ಳಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವಾಗಿಸುವ ದೊಡ್ಡ ಸಂಕಲ್ಪ, ಗುಲಾಮಿತನದ ಎಲ್ಲ ಶೃಂಖಲೆಗಳಿಂದ ಹೊರಬರುವುದು, ನಾವು ಯಾವುದಕ್ಕೆ ವಾರಸುದಾರರಾಗಿದ್ದೇವೋ ಆ ಬಗ್ಗೆ ಹೆಮ್ಮೆ ಹೊಂದುವುದು, ಏಕತೆ, ಐದನೆಯದಾಗಿ ಪ್ರಧಾನಿ-ಮುಖ್ಯಮಂತ್ರಿಗಳೂ ಸೇರಿದಂತೆ ಎಲ್ಲ ನಾಗರೀಕರು ತಮ್ಮ ಕರ್ತವ್ಯಗಳನ್ನು ಪಾಲಿಸುವುದು.
- ತಮ್ಮ ಭಾಷಣದ ಆರಂಭದಲ್ಲಿಯೇ ಪ್ರಧಾನಿ ಮೋದಿಯವರು ಅಂಬೇಡ್ಕರ್, ನೆಹರು, ಸಾವರ್ಕರ್, ಬುಡಕಟ್ಟು ಹೋರಾಟಗಾರರಾರದ ಬಿರ್ಸಾ ಮುಂಡಾ ಸೇರಿದಂತೆ ಹಲವು ಸ್ವಾತಂತ್ರ್ಯ ಕಲಿಗಳು ಹಾಗೂ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಎಲ್ಲ ಮಹಿಳಾ ಹೋರಾಟಗಾರರನ್ನು ನೆನಪಿಸಿಕೊಂಡರು.
- ಪ್ರಜಾಪ್ರಭುತ್ವ ಮಾದರಿಗಳ ತಾಯಿ ಭಾರತ. ಸ್ವಾತಂತ್ರ್ಯ ಸಿಕ್ಕ ಪ್ರಾರಂಭದಲ್ಲಿ ಈ ದೇಶ ಕೆಲ ದಿನಗಳಲ್ಲೇ ವಿಫಲವಾಗುವುದೆಂಬ ಅನುಮಾನಗಳಿದ್ದವು. ಆದರೆ ಜನ ಅದನ್ನು ತಮ್ಮ ಸಾಮೂಹಿಕ ಯತ್ನದಿಂದ ಸುಳ್ಳಾಗಿಸಿದರು.
- ನಮ್ಮದು ಮಹತ್ವಾಕಾಂಕ್ಷಿಗಳ ನೆಲ. ಸರ್ಕಾರದ ಕಾರ್ಯಕ್ರಮಗಳಲ್ಲಿ ಜನರೂ ಭಾಗವಹಿಸುವಿಕೆ ಬಯಸುತ್ತಾರೆ. ಇದನ್ನು ಎಲ್ಲ ಸರ್ಕಾರಗಳೂ ಅರ್ಥ ಮಾಡಿಕೊಳ್ಳಬೇಕು.
- ಭಾರತ ಮೊದಲು ಎಂಬ ಮಂತ್ರವೇ ನಮ್ಮನ್ನು ಮುನ್ನೆಡಸಬೇಕಿದೆ.
- ಭಾರತದಲ್ಲೇ ತಯಾರಿಸುವ ಮೂಲಕ ದೇಶವನ್ನು ಆತ್ಮನಿರ್ಭರವಾಗಿಸುವುದಕ್ಕೆ ಖಾಸಗಿ ಕಂಪನಿಗಳು ಮುಂದೆ ಬರಬೇಕು.
- ಇವತ್ತು ಚಿಕ್ಕ ಮಗುವೂ ಆತ್ಮನಿರ್ಭರ ಭಾರತ ಎಂಬ ಘೋಷಣೆಯನ್ನು ಹೇಳುತ್ತಿದೆ.
- ಆಟದ ಮೈದಾನದಿಂದ ಯುದ್ಧಭೂಮಿವರೆಗೆ ಮಹಿಳೆಯರು ಮುಂದೆ ಬಂದಿದ್ದಾರೆ. ಮುಂದಿನ 25 ವರ್ಷಗಳ ಭಾರತದ ಭವಿಷ್ಯ ರೂಪಿಸುವಲ್ಲಿ ಅವರ ಕೊಡುಗೆ ಗಮನಾರ್ಹವಾಗಲಿದೆ.
- ಮಹಿಳೆಯರ ಘನತೆ ಕುಗ್ಗಿಸುವ ಏನನ್ನೂ ಮಾಡುವುದಿಲ್ಲ ಎಂಬ ಸಂಕಲ್ಪ ಎಲ್ಲರೂ ಮಾಡಬೇಕಿದೆ.
- ಶಾಸ್ತ್ರಿಯವರ ಜೈ ಜವಾನ್-ಜೈ ಕಿಸಾನ್ ಜತೆ ವಾಜಪೇಯಿಯವರು ಜೈ ವಿಜ್ಞಾನ್ ಜೋಡಿಸಿದರು. ಇವತ್ತು ನಮ್ಮ ಯುವಜನ ಸಂಶೋಧನೆ ಮತ್ತು ಅಭಿವೃದ್ಧಿಗಳತ್ತ ಹೊರಳುತ್ತಿದ್ದಾರೆ. ಮುಂದಿನ ಆವಿಷ್ಕಾರಗಳು ಬರಲಿರುವುದು ಸಮುದ್ರದಾಳ ಮತ್ತು ಬಾಹ್ಯಾಕಾಶದಿಂದ. ಈ ನಿಟ್ಟಿನಲ್ಲಿ ನಮ್ಮ ಯುವಕರು ತಮ್ಮ ಪ್ರತಿಭೆ ತೋರುತ್ತಿದ್ದಾರೆ.
Addressing the nation on Independence Day. https://t.co/HzQ54irhUa
— Narendra Modi (@narendramodi) August 15, 2022