ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ್ (ಎಸ್ ಬಿ ಎಂ-ಜಿ) ಪ್ರಾರಂಭವಾದ ಸುಮಾರು ಎಂಟು ವರ್ಷಗಳ ನಂತರ ಮತ್ತೊಂದು ಮೈಲಿಗಲ್ಲನ್ನು ದಾಖಲಿಸಿದೆ – 1,01,462 ಹಳ್ಳಿಗಳು ತಮ್ಮನ್ನು ಬಯಲು ಬಹಿರ್ದೆಸೆ ಮುಕ್ತ(ಒ ಡಿ ಎಫ್) ಪ್ಲಸ್ ಎಂದು ಘೋಷಿಸಿಕೊಂಡಿವೆ.
ಈ ಹಳ್ಳಿಗಳು ತಮ್ಮ ಬಯಲು ಬಹಿರ್ದೆಸೆ ಮುಕ್ತ ಸ್ಥಾನಮಾನವನ್ನು ಉಳಿಸಿಕೊಂಡಿವೆ ಮತ್ತು ಘನ ಮತ್ತು / ಅಥವಾ ದ್ರವ ತ್ಯಾಜ್ಯವನ್ನು ನಿರ್ವಹಿಸಲು ವ್ಯವಸ್ಥೆಗಳನ್ನು ಹೊಂದಿವೆ .
ಸುಮಾರು ಎಂಟು ವರ್ಷಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಅವರ 150 ನೇ ಜನ್ಮ ಜಯಂತಿಯಂದು ದೇಶವನ್ನು ಬಯಲು ಬಹಿರ್ದೆಸೆ ಮುಕ್ತ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಕೋನದೊಂದಿಗೆ ಕೆಂಪು ಕೋಟೆಯ ಗೋಪುರಗಳಿಂದ ಸ್ವಚ್ಛ ಭಾರತ ಅಭಿಯಾನವನ್ನು ಪ್ರಾರಂಭಿಸಿದರು.
ಜಲಶಕ್ತಿ ಸಚಿವಾಲಯದ ಪ್ರಕಾರ, ಒಂದು ಲಕ್ಷ ಒಡಿಎಫ್ ಪ್ಲಸ್ ಗ್ರಾಮಗಳು ಸಣ್ಣ ಸಾಧನೆಯಲ್ಲ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಯು ತಾಂತ್ರಿಕ ಸ್ವರೂಪದ್ದಾಗಿದ್ದು, ಗ್ರಾಮೀಣ ಭಾರತಕ್ಕೆ ತುಲನಾತ್ಮಕವಾಗಿ ಹೊಸದಾಗಿದೆ ಮತ್ತು ಇದು ಎರಡನೇ ತಲೆಮಾರಿನ ಸಮಸ್ಯೆಯಾಗಿದೆ.
ಶೌಚಾಲಯಗಳನ್ನು ಒದಗಿಸುವುದರಿಂದ ಮಲದ ತ್ಯಾಜ್ಯವನ್ನು ನಿರ್ವಹಿಸುವ ಅಗತ್ಯಕ್ಕೆ ಕಾರಣವಾಗಿದೆ ಎಂದು ಸಚಿವಾಲಯ ಹೇಳಿದೆ.
“ಮತ್ತು ಎಸ್ ಬಿ ಎಂ-ಜಿ ಯ ಎರಡನೇ ಹಂತವು ನಮ್ಮ ಗ್ರಾಮಗಳನ್ನು ಸ್ವಚ್ಚಗೊಳಿಸುವುದು ಮಾತ್ರವಲ್ಲದೆ, ಗ್ರಾಮೀಣ ಕುಟುಂಬಗಳಿಗೆ ಆದಾಯವನ್ನು ಸೃಷ್ಟಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಅವಶ್ಯಕತೆಗಳನ್ನು ಪೂರೈಸುವ ಹೊಸ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಎಲ್ಲಾ ರೀತಿಯ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಿಸುವುದು” ಎಂದು ಸಚಿವಾಲಯ ಹೇಳಿದೆ.