ನವದೆಹಲಿ: ಬೌದ್ಧ ಧರ್ಮವು ಭಾರತದ ಶ್ರೇಷ್ಠ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ದೇಶದ ಪ್ರಜಾಪ್ರಭುತ್ವವು ಅದರ ಆದರ್ಶಗಳು ಮತ್ತು ಚಿಹ್ನೆಗಳಿಂದ ಆಳವಾಗಿ ಪ್ರಭಾವಿತವಾಗಿದೆ ಎಂದು ಹೇಳಿದರು.
“ನಮ್ಮ ಪ್ರಜಾಪ್ರಭುತ್ವವು ಬೌದ್ಧ ಆದರ್ಶಗಳು ಮತ್ತು ಚಿಹ್ನೆಗಳಿಂದ ಆಳವಾಗಿ ಪ್ರಭಾವಿತವಾಗಿದೆ. ರಾಷ್ಟ್ರೀಯ ಲಾಂಛನವನ್ನು ಸಾರನಾಥದ ಅಶೋಕ ಸ್ತಂಭದಿಂದ ತೆಗೆದುಕೊಳ್ಳಲಾಗಿದೆ, ಅದರ ಮೇಲೆ ಧರ್ಮ ಚಕ್ರವನ್ನು ಸಹ ಕೆತ್ತಲಾಗಿದೆ. ಲೋಕಸಭೆಯ ಸ್ಪೀಕರ್ ಪೀಠದ ಹಿಂದೆ ‘ಧರ್ಮಚಕ್ರ ಪ್ರವರ್ತನಾಯ’ ಎಂಬ ಸೂತ್ರವನ್ನು ಕೆತ್ತಲಾಗಿದೆ” ಎಂದು ಅವರು ವಿಡಿಯೋ ಸಂದೇಶದ ಮೂಲಕ ಉತ್ತರ ಪ್ರದೇಶದ ಸಾರನಾಥದಲ್ಲಿ ಧಮ್ಮಚಕ್ರ ದಿನ 2022 ರ ಆಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ನಮ್ಮ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರು ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ, ಪ್ರಾಚೀನ ಬೌದ್ಧ ಸಂಘಗಳ ಅನೇಕ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು.
ಭಗವಾನ್ ಬುದ್ಧನ ಪ್ರಕಾರ, ಶಾಂತಿಗಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ ಮತ್ತು ಭಗವಾನ್ ಬುದ್ಧನ ಬೋಧನೆಗಳಲ್ಲಿ, ಆಂತರಿಕ ಶಾಂತಿಗೆ ಒತ್ತು ನೀಡಲಾಗಿದೆ ಎಂದು ರಾಷ್ಟ್ರಪತಿ ಹೇಳಿದರು.
“ಈ ಸಂದರ್ಭದಲ್ಲಿ ಈ ಬೋಧನೆಗಳನ್ನು ಸ್ಮರಿಸುವ ಉದ್ದೇಶವೇನೆಂದರೆ, ಭಗವಾನ್ ಬುದ್ಧನ ಬೋಧನೆಗಳ ಸರಿಯಾದ ಅರ್ಥವನ್ನು ಎಲ್ಲಾ ಜನರು ರೂಢಿಸಿಕೊಳ್ಳಬೇಕು ಮತ್ತು ಶಾಂತಿ ಮತ್ತು ಸಹಾನುಭೂತಿಯಿಂದ ತುಂಬಿದ ಜಗತ್ತನ್ನು ನಿರ್ಮಿಸಲು ಎಲ್ಲಾ ಕೆಡುಕುಗಳು ಮತ್ತು ಅಸಮಾನತೆಗಳನ್ನು ತೊಡೆದುಹಾಕಬೇಕು.”
ಸಂಸ್ಕೃತಿ ಸಚಿವಾಲಯವು ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟದ ಸಹಯೋಗದೊಂದಿಗೆ ಆಷಾಢ ಪೂರ್ಣಿಮಾ ದಿವಸವನ್ನು ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಆಚರಿಸುತ್ತಿದೆ.